ಬೆಂಗಳೂರು: ಬಸವರಾಜ ಬೊಮ್ಮಾಯಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದು ಜು.28ಕ್ಕೆ ಒಂದು ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ವರ್ಷದ ಸಾಧನೆ ಕಾರ್ಯಕ್ರಮ ಆಯೋಜಿಸುವ ಮೂಲಕ ಆ.3ರ ಸಿದ್ದರಾಮೋತ್ಸವದ ಅಬ್ಬರವನ್ನು ಕಟ್ಟಿಹಾಕಲು ಬಿಜೆಪಿ ಮುಂದಾಗಿದೆ.
ಧಾರವಾಡ, ಹಾವೇರಿ ಜಿಲ್ಲೆಗಳ ಪ್ರವಾಸಕ್ಕೆ ತೆರಳುವ ಮುನ್ನ ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲೆಂದು ಜು.28ರಂದು ವರ್ಷದ ಸಾಧನಾ ಸಮಾವೇಶ ಆಯೊಜಿಸಲು ಶುಕ್ರವಾರ ನಡೆದ ಬಿಜೆಪಿ ಚಿಂತನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಸರ್ಕಾರಿ ಕಾರ್ಯಕ್ರಮ, ದೊಡ್ಡಬಳ್ಳಾಪುರದಲ್ಲಿ ಪಕ್ಷದ ವತಿಯಿಂದ ಬೃಹತ್ ಸಮಾವೇಶ ಏರ್ಪಡಿಸಲಾಗುತ್ತಿದೆ. ಬೇರೆ ಬೇರೆ ಕ್ಷೇತ್ರಗಳಿಂದ ಇದೇ ರೀತಿ ಸಮ್ಮೇಳನಕ್ಕೆ ಬೇಡಿಕೆಗಳು ಬಂದಿದ್ದು, ಮುಂದಿನ ಹಂತದಲ್ಲಿ ನಿರ್ಧರಿಸಲಾಗುವುದು. ರಾಜ್ಯದ ಅಭಿವೃದ್ಧಿ, ಮುಂದಿನ ಚುನಾವಣೆಗಳ ದೃಷ್ಟಿಯಿಂದ ಸರ್ಕಾರ ಮತ್ತು ಪಕ್ಷ ಸಮನ್ವಯದಿಂದ ಕೆಲಸ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ, ಯೋಜನೆಗಳ ಬಗ್ಗೆ ಮನೆ ಮನೆಗೆ ಪ್ರಚಾರ ಅಭಿಯಾನ, ಪಕ್ಷದ ಸಂಘಟನಾ ಚಟುವಟಿಕೆಗಳ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರಕ್ಷಣೆ, ಪರಿಹಾರ
ಅತಿವೃಷ್ಟಿ, ಪ್ರವಾಹ ಬಾಧಿತ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ಜತೆಗೆ ಪರಿಹಾರ ವ್ಯವಸ್ಥೆ ತುರ್ತಾಗಿ ಕೈಗೊಳ್ಳುವ ಕುರಿತು ಡಿಸಿಗಳಿಗೆ ವಿಡಿಯೋ ಸಂವಾದದಲ್ಲಿ ಸೂಚಿಸಿರುವೆ. ಹಿಂದಿನ ವರ್ಷಗಳಂತೆಯೇ ಎನ್ಡಿಆರ್ಎಫ್ ನಿಯಮಾವಳಿಗಿಂತ ದುಪ್ಪಟ್ಟು ಮೊತ್ತದ ಬೆಳೆ, ಮನೆ ಹಾನಿ ಪರಿಹಾರ ವಿತರಣೆಗೆ ಆದೇಶ ಹೊರಡಿಸಿದ್ದು, ತ್ವರಿತ ಸಮೀಕ್ಷೆ ನಡೆಸಿ ಬೆಳೆ ನಷ್ಟಕ್ಕೆ ಇನ್ಪುಟ್ ಸಬ್ಸಿಡಿ ಪಾವತಿಗೆ ತಿಳಿಸಿರುವೆ ಎಂದರು.
ಪಾರದರ್ಶಕ ಆಡಳಿತ
ಯಾರು ಏನೇ ಹೇಳಲಿ, ನಮ್ಮ ಸರ್ಕಾರ ಪಾರದರ್ಶಕವಾಗಿದ್ದು, ಮುಚ್ವಿಡುವಂಥದ್ದೇನಿಲ್ಲ. ತಾತ್ವಿಕ ನಿಲುವಿಗೆ ಬದ್ಧವಾಗಿ ನಾನು ನೀಡಿದ ಸೂಚನೆಯಂತೆ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ತಕ್ಷಣ ಹಿಂಪಡೆಯಲಾಗಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ ಈ ಆದೇಶ ನೀಡಲಾಗಿತ್ತು. ಮಹಿಳಾ ನೌಕರರಿಗೆ ತೊಂದರೆಯಾಗುತ್ತದೆ ಎನ್ನುವ ಸರ್ಕಾರಿ ನೌಕರರ ಸಂಘದ ಮನವಿಯಲ್ಲಿ ಅರ್ಥವಿದೆ ಎಂದು ಸಿಎಂ ಬೊಮ್ಮಾಯಿ ಸಮಜಾಯಿಷಿ ನೀಡಿದರು.
ಮಹಾರಾಷ್ಟ್ರದ ಮಾಜಿ ಸಿಎಂ ಮೊಮ್ಮಕ್ಕಳ ಜೊತೆಗಿನ ಸಾರಾ-ಜಾಹ್ನವಿ ಸಂಬಂಧ ಬಟಾಬಯಲು!
ರಿಷಿ ಬಿಟ್ಟು ಯಾರನ್ನಾದ್ರೂ ಬೆಂಬಲಿಸಿ! ಬೋರಿಸ್ ಜಾನ್ಸನ್ಗೆ ಇನ್ಫಿ ಮೂರ್ತಿ ಅಳಿಯನ ಮೇಲೆ ಯಾಕಿಷ್ಟು ಕೋಪ?