More

    ಕಾಯಕ ಸಿದ್ಧಾಂತ ಪ್ರತಿಪಾದಿಸಿದ ಬಸವಣ್ಣ; ಹುಕ್ಕೇರಿ ಮಠದಲ್ಲಿ ನಮ್ಮೂರ ಜಾತ್ರೆ

    ಹಾವೇರಿ: ಜಗತ್ತಿನ ಎಲ್ಲ ಧರ್ಮಗಳು ಮತ್ತು ಧರ್ಮ ಗುರುಗಳು ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿದರೆ, ಮಾನವೀಯತೆ ಮತ್ತು ಕಾಯಕ ಸಿದ್ಧಾಂತವನ್ನು ಪ್ರತಿಪಾದಿಸಿದ ಏಕೈಕ ಧರ್ಮಗುರು ಎಂದರೆ ಅವರು ಮಹಾನ್ ಮಾನವತಾವಾದಿ ಬಸವಣ್ಣನವರು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

    ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಲಿಂ.ಶಿವಬಸವ ಸ್ವಾಮೀಜಿಯವರ 78ನೇ ಮತ್ತು ಲಿಂ.ಶಿವಲಿಂಗ ಸ್ವಾಮೀಜಿಯವರ 15ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ನಮ್ಮೂರ ಜಾತ್ರೆಯಲ್ಲಿ ಗುರುವಾರದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಸಾಕ್ಷಾತ್ಕಾರವಾದರೆ, ಮಹಾವೀರನಿಗೆ ಅಹಿಂಸೆ, ಪೈಗಂಬರರಿಗೆ ಗುಹೆಯಲ್ಲಿ ಸಾಕ್ಷಾತ್ಕಾರ ಕಂಡಿದೆ. ಬಸವಣ್ಣನಿಗೆ ಹಸಿದವರಲ್ಲಿ, ದಯೆಯಲ್ಲಿ ಹಾಗೂ ಮಾನವೀಯತೆಯಲ್ಲಿ ದೇವರ ಸಾಕ್ಷಾತ್ಕಾರ ಕಂಡಿದೆ. ಈ ಮೂಲಕ ಅವರು ಸಮಾಜದ ಎಲ್ಲ ವರ್ಗದವರ ಅಭ್ಯುದಯಕ್ಕೆ ಶ್ರಮಿಸಿ ವಿಶ್ವಗುರು ಆಗಿದ್ದಾರೆ ಎಂದು ಹೇಳಿದರು.

    ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಆದರ್ಶವಾಗಿವೆ. ವಿದೇಶಿಯರು ನಮ್ಮ ಸಂಸೃತಿಗೆ ಮಾರು ಹೋಗಿ ಅದನ್ನು ಅನುಸರಿಸುತ್ತಿದ್ದಾರೆ. ಆದರೆ, ನಮ್ಮ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸುತ್ತಿರುವುದು ವಿಷಾದನೀಯ. ಮಹಾತ್ಮರ ಪುಣ್ಯಸ್ಮರಣೆಯು ನಮ್ಮ ಯುವ ಜನತೆಗೆ ಒಂದು ದಾರಿದೀಪವಾಗಿವೆ ಎಂದು ಹೇಳಿದರು.

    ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಸರ್ಕಾರವು ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೊಷಿಸಿರುವುದನ್ನು ಶ್ರೀಮಠ ಸ್ವಾಗತಿಸುತ್ತದೆ. ಸರ್ಕಾರದ ಈ ಕ್ರಮದಿಂದ ಮುಂದಿನ ದಿನಗಳಲ್ಲಿ ವಚನ ಸಾಹಿತ್ಯ ಇನ್ನೂ ಹೆಚ್ಚು ಪ್ರಚಾರ ಮತ್ತು ಪ್ರಸಾರ ಮಾಡಲು ಸಹಾಯವಾಗುತ್ತದೆ ಎಂದು ಹೇಳಿದರು.

    ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮತ್ತು ಬಿಜೆಪಿಯ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು. ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಸ್ವಾಮೀಜಿಯವರಿಗೆ ಶ್ರೀಮಠದಿಂದ ಸನ್ಮಾನಿಸಲಾಯಿತು.

    ಕೊತಬಾಳದ ಅರುಣೋದಯ ಕಲಾತಂಡ ರಾಜಶೇಖರ ಹಿರೇಮಠ ನೇತೃತ್ವದಲ್ಲಿ ಜಾನಪದ ವೈವಿಧ್ಯತೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಕಲಾಪ್ರದರ್ಶನ ಕಂಡು ಭಕ್ತರು ಚಪ್ಪಾಳೆಯ ಸುರಿಮಳೆಗೈದರು.

    ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ನಾಗರಾಜ ಕುರುವತ್ತೇರ, ನಾರಾಯಣ ಹೆಗಡೆ, ಆನಂದ ಮತ್ತಿಗಟ್ಟಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

    ಚಿತ್ರದುರ್ಗದ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ವೀರಬಸವ ದೇವರು, ಚಂದ್ರಶೇಖರ ದೇವರು, ಶಿವಪ್ರಸಾದ ದೇವರು, ತಮ್ಮಣ್ಣ ಮುದ್ದಿ, ಗಂಗಮ್ಮ ಯರೇಶೀಮಿ, ತಿಪ್ಪೇಸ್ವಾಮಿ ಶಿವಸಾಲಿ, ನೀಲಮ್ಮ ಗುಂಜೆಟ್ಟಿ, ಬಕ್ಕೇಶ ಚಿಕ್ಕಮಠ, ಕಮಲಮ್ಮ ಹಿರೇಮಠ, ಶಿವಬಸಪ್ಪ ತುಪ್ಪದ, ಗಣೇಶ ಮುಷ್ಠಿ, ಮಲ್ಲಿಕಾರ್ಜುನ ಹಂದ್ರಾಳ, ಪ್ರೇಮಾ ಕಬ್ಬೂರ, ಈರಾವತಿ ಅಗಡಿ, ಸುಲೋಚನಾ ವಿರಕ್ತಮಠ, ಆನಂದ ಅಟವಾಳಗಿ, ಕರಬಸಪ್ಪ ಹಲಗಣ್ಣನವರ, ಶಿವಯೋಗಿ ಹೂಲಿಕಂತಿಮಠ, ಮತ್ತಿತರರು ಉಪಸ್ಥಿತರಿದ್ದರು.

    ಸಂಗಮೇಶ ಪಾಟೀಲ ಪ್ರಾರ್ಥಿಸಿದರು. ಶಿವಯೋಗಿ ವಾಲಿಶೆಟ್ಟರ ಸ್ವಾಗತಿಸಿದರು. ಚಂದ್ರಶೇಖರ ದೇವರು ಮತ್ತು ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ವಿಜಯಕುಮಾರ ಕೂಡ್ಲಪ್ಪನವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts