ಚಿತ್ರದುರ್ಗ: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅಕ್ಟೋಬರ್ 1 ಮತ್ತು 2 ರಂದು 21 ನೇ ಕಲ್ಯಾಣ ಪರ್ವ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಶ್ರೀ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವ ಧರ್ಮ ಪೀಠದ 20 ಕಲ್ಯಾಣ ಪರ್ವ ಉತ್ಸವಗಳು ಯಶಸ್ವಿಯಾಗಿ ನಡೆದಿದ್ದು ಈ ಬಾರಿಯೂ ಅದೇ ರೀತಿ ಸಂಘಟಿಸಲಾಗುತ್ತಿದೆ ಎಂದರು.
ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ನೇತೃತ್ವದಲ್ಲಿ ನಡೆಯುವ ಕಲ್ಯಾಣ ಪರ್ವದಲ್ಲಿ ನಾನು ಭಾಗಿಯಾಗುತ್ತಿಲ್ಲ. ಪ್ರತ್ಯೇಕವಾಗಿ ಉತ್ಸವ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಉತ್ಸವವೂ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ಕರ್ನಾಟಕ ಸೇರಿ ಬಸವ ಅನುಯಾಯಿಗಳು ಇದಕ್ಕೆ ಸಾಥ್ ನೀಡುತ್ತಿದ್ದಾರೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ದೆಹಲಿ ಸೇರಿ ಅನೇಕ ರಾಜ್ಯಗಳಿಂದ 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಶ್ರೀ ಪ್ರಭುಲಿಂಗ ಸ್ವಾಮೀಜಿ, ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಕೆ.ವೀರೇಶ್ಕುಮಾರ್ ತಿಮ್ಮಪ್ಪಯ್ಯನಹಳ್ಳಿ, ಮುಖಂಡರಾದ ಬಸವಂತರಾವ್ ಬಿರಾದರ್, ಧೂಳಪ್ಪ ಸೊರಳ್ಳಿ, ಕಲ್ಲೇಶ್ ಲಿಂಗಾಯತ, ಜಿ.ಸಿ.ಮನೋಹರ್, ಆರ್.ಶ್ರೀನಿವಾಸ್ ಇತರರಿದ್ದರು.