ಬೆಂಗಳೂರು: ದಲ್ಲಾಳಿಗಳ ಸಹಾಯದಿಂದ ಆಧಾರ್, ಪಾನ್ ಪಾರ್ಡ್ ಮತ್ತು ಭಾರತೀಯ ಪಾಸ್ಪೋರ್ಟ್ ಮಾಡಿಸಿಕೊಂಡಿದ್ದ ಬಾಂಗ್ಲಾದೇಶದ ಪ್ರಜೆ ಮೂರು ವರ್ಷಗಳ ಬಳಿಕ ಇಮಿಗ್ರೇಷನ್ ಅಧಿಕಾರಿಗಳಿಗೆ ಸೆರೆ ಸಿಕ್ಕಿದ್ದಾನೆ. ಬಾಂಗ್ಲಾದೇಶ ಮೂಲದ ಸಕೀಲ್ ಅಹ್ಮದ್ (28) ಬಂಧಿತ.
10ನೇ ತರಗತಿ ವ್ಯಾಸಂಗ ಮಾಡಿರುವ ಸಕೀಲ್, ಬಾಂಗ್ಲಾದ ಏಜೆಂಟ್ ಹುಸೇನ್ ಎಂಬಾತನ ಸಂಪರ್ಕ ಮಾಡಿ 1.10 ಲಕ್ಷ ರೂ. ಕೊಟ್ಟು ಭಾರತೀಯ ಏಜೆಂಟ್ ಸಂಪರ್ಕ ಮಾಡಿ ಆಧಾರ್, ಪಾನ್ ಕಾರ್ಡ್ ಮತ್ತು ಭಾರತೀಯ ಪಾಸ್ ಪೋರ್ಟ್ ಪಡೆಯುತ್ತಾನೆ. ಆನಂತರ 2019ರಲ್ಲಿ ಪಶ್ಚಿಮ ಬಂಗಾಳದ ಅಕೋರಾ ಗಡಿಭಾಗದಲ್ಲಿ ಸಾಫೀಕ್ ಎಂಬಾತ ಸಹಾಯದಿಂದ ಭಾರತಕ್ಕೆ ಬಂದು ಚೆನ್ನೈ ತಲುಪುತ್ತಾನೆ. ಅಲ್ಲಿ ಕ್ಯಾಂಟೀನ್ನಲ್ಲಿ ಕೆಲಸಕ್ಕೆ ಸೇರಿದ್ದು, ಕೆಲಸ ಮಾಡಿಕೊಂಡು ಭಾರತೀಯ ಪ್ರಜೆ ಎಂದು ಮತ್ತಷ್ಟು ದಾಖಲೆಗಳನ್ನು ಸಿದ್ದಪಡಿಸಿಕೊಂಡು ವೀಸಾ ಪಡೆದು ಏಪ್ರಿಲ್ನಲ್ಲಿ ಮಲೇಷ್ಯಾಗೆ ಪ್ರಯಾಣ ಬೆಳೆಸಿದ್ದ.
ಮಲೇಷ್ಯಾದ ಇಮಿಗ್ರೇಷನ್ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿ ಕೊನೆಗೆ ಬಾಂಗ್ಲಾ ಪ್ರಜೆ ಎಂಬುದು ಗೊತ್ತಾಗಿ ಭಾರತಕ್ಕೆ ಗಡಿಪಾರು ಮಾಡಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಾಂಗ್ಲಾ ಪ್ರಜೆಯನ್ನು ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.