ಬೆಂಗಳೂರು: ಬೆಲ್ಬಾಟಂ ಖ್ಯಾತಿಯ ನಿರ್ದೇಶಕ ಜಯತೀರ್ಥ ಸದ್ಯ ‘ಬನಾರಸ್’ ಮೇಲೆಯೇ ಪೂರ್ತಿ ದೃಷ್ಟಿ ನೆಟ್ಟಿದ್ದಾರೆ. ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಂಡಿರುವ ಅವರು, ಸದ್ಯ ಬಾಕಿ ಉಳಿದ ಹಾಡಿನ ಶೂಟಿಂಗ್ನತ್ತ ಗಮನ ಹರಿಸಿದ್ದಾರೆ. ಎರಡು ಹಾಡುಗಳ ಪೈಕಿ ಒಂದರ ಶೂಟಿಂಗ್ ಈಗಾಗಲೇ ಮುಗಿದಿದ್ದು, ಹಲವು ವಿಶೇಷತೆಗಳ ಸರಮಾಲೆಯನ್ನೇ ಆ ಹಾಡಿನಲ್ಲಿ ಪೋಣಿಸಿದ್ದಾರೆ ನಿರ್ದೇಶಕರು.
ಇದನ್ನೂ ಓದಿ: ಉಪ್ಪಿ ಹುಟ್ಟುಹಬ್ಬಕ್ಕೆ ‘ಕಬ್ಜ’ ಚಿತ್ರದ ಥೀಮ್ ಪೋಸ್ಟರ್ …
ಝೇಯ್ದ್ ಖಾನ್ ಮತ್ತು ಸೋನಲ್ ಮೊಂತೆರೋ ಮುಖ್ಯಭೂಮಿಕೆಯಲ್ಲಿರುವ ‘ಬನಾರಸ್’ ಚಿತ್ರದ ರೊಮ್ಯಾಂಟಿಕ್ ಹಾಡೊಂದರ ಚಿತ್ರೀಕರಣಕ್ಕೆ ಕಳೆದೊಂದು ತಿಂಗಳಿಂದ ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಅದರಂತೆ, ಒಟ್ಟು ಎಂಟು ಸೆಟ್ಗಳನ್ನು ನಿರ್ಮಾಣ ಮಾಡಿ ಅದರಲ್ಲಿ ಒಂದೇ ಹಾಡಿನ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ.
‘ಸಿನಿಮಾದಲ್ಲಿ ಈ ಹಾಡು ತುಂಬ ವಿಶೇಷ, ಹಾಗಾಗಿ ಅದನ್ನು ಅಷ್ಟೇ ವಿಭಿನ್ನವಾಗಿ ತೋರಿಸಬೇಕೆಂಬ ನಿಟ್ಟಿನಲ್ಲಿ ಭಾರತೀಯ ಪರಂಪರೆ, ಪಾಶ್ಚಾತ್ಯ ಶೈಲಿ, ಜನಪದ ಶೈಲಿಯನ್ನು ಆಧರಿಸಿ ಹಾಡನ್ನು ಸೃಷ್ಟಿಸಲಾಗಿದೆ. ಈ ಒಂದು ಹಾಡಿಗಾಗಿ ರೋಮನ್ ಸೆಟ್, ಹಂಪೆಯನ್ನು ಹೋಲುವ ಸೆಟ್, ಜನಪದ ಹೀಗೆ ಬಗೆಬಗೆಯ ಒಟ್ಟು ಎಂಟು ಸೆಟ್ಗಳನ್ನು ಕಲಾ ನಿರ್ದೇಶಕ ಅರುಣ್ ಸಾಗರ್ ಮಾಡಿಕೊಟ್ಟಿದ್ದಾರೆ. ಏಳೆಂಟು ದಿನದಲ್ಲಿ ಹಾಡಿನ ಚಿತ್ರೀಕರಣ ಮುಗಿಸಿಕೊಂಡಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಜಯತೀರ್ಥ.
ಇದನ್ನೂ ಓದಿ: ನಷ್ಟ ತುಂಬಿಕೊಡಿ … ಮಹಾನಗರ ಪಾಲಿಕೆ ಮೇಲೆ ಕಂಗನಾ ಕೇಸ್
ಬೆಳಕಿನ ಕವಿತೆ…. ಎಂಬ ಸಾಲಿನಿಂದಲೇ ಹಾಡು ಶುರುವಾಗಲಿರುವುದರಿಂದ ಅಷ್ಟೇ ಕಲರ್ಫುಲ್ ಆಗಿ ದೃಶ್ಯಗಳ ಸೆರೆಹಿಡಿಯಲಾಗಿದೆಯಂತೆ. ವಿ. ನಾಗೇಂದ್ರ ಪ್ರಸಾದ್ ಬರೆದ ಸಾಹಿತ್ಯಕ್ಕೆ ನೃತ್ಯ ನಿರ್ದೇಶಕ ಎ. ಹರ್ಷ ಕೋರಿಯೋಗ್ರಾಫ್ ಮಾಡಿದ್ದಾರೆ. ಲಾಕ್ಡೌನ್ ಸಡಿಲಿಕೆ ಆಗುತ್ತಿದ್ದಂತೆ, ಡಬ್ಬಿಂಗ್, ಎಡಿಟಿಂಗ್ ಕೆಲಸಗಳನ್ನು ಮುಗಿಸಿಕೊಂಡಿರುವ ನಿರ್ದೇಶಕರು, ಶೀಘ್ರದಲ್ಲಿ ಇನ್ನೊಂದು ಹಾಡಿನ ಚಿತ್ರೀಕರಣಕ್ಕೂ ಪ್ಲಾನ್ ಹಾಕುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ.