ಸುಳ್ಯ: ಮಂಡೆಕೋಲಿನ ಕನ್ಯಾನದಲ್ಲಿ ಗುಂಪಿನಿಂದ ಪ್ರತ್ಯೇಕಗೊಂಡ ಮರಿಯಾನೆ, ಕೊನೆಗೂ ತಾಯಿಯ ಮಡಿಲು ಸೇರಿದ್ದು ಅರಣ್ಯ ಇಲಾಖೆಯ ಸತತ ಪ್ರಯತ್ನಕ್ಕೆ ಯಶಸ್ಸು ದೊರೆತಂತಾಗಿದೆ.
ಶುಕ್ರವಾರ ಬೆಳಗ್ಗಿನ ಜಾವ ಸುಮಾರು ಮೂರು ತಿಂಗಳ ಮರಿ ಆನೆ ಕನ್ಯಾನದ ರಾಜಶೇಖರ ಭಟ್ ಎಂಬುವರ ಜಾಗದಲ್ಲಿ ಕಂಡುಬಂದಿತ್ತು. ಸ್ಥಳೀಯರಿಂದ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆಯನ್ನು ತಾಯಿ ಜತೆ ಸೇರಿಸುವ ಕಾರ್ಯಾಚರಣೆ ನಡೆಸಿದ್ದರೂ, ಯಶಸ್ಸು ಕಂಡಿರಲಿಲ್ಲ. ಮೂರನೇ ಬಾರಿ ಆನೆಗಳ ಹಿಂಡಿನಿಂದ 50 ಮೀ.ದೂರದಲ್ಲಿ ಮರಿಯಾನೆಯನ್ನು ಬಿಟ್ಟು ಬರಲಾಗಿತ್ತು. ಒಂದು ವೇಳೆ ಗುಂಪಿಗೆ ಸೇರಿಸಿಕೊಳ್ಳದಿದ್ದರೆ ಮತ್ತೆ ಮರಿಯಾನೆಯನ್ನು ಆನೆ ಶಿಬಿರಕ್ಕೆ ಕಳುಹಿಸುವ ನಿರ್ಧಾರ ಅರಣ್ಯ ಇಲಾಖೆಯದಾಗಿತ್ತು. ಅಂತೆಯೇ ಶನಿವಾರ ಬೆಳಗ್ಗೆ ಬಿಟ್ಟು ಬಂದ ಸ್ಥಳಕ್ಕೆ ಹೋದಾಗ ಮರಿಯಾನೆ ಇರಲಿಲ್ಲ. ಇದರಿಂದ ಮರಿಯಾನೆ ತಾಯಿಯೊಂದಿಗೆ ಸೇರಿರುವುದು ದೃಢಪಟ್ಟಿದೆ.