ಮುಳಗುಂದ: ಗುರುವಾರ ಜರುಗಿದ ಬಿ.ಎ 6ನೇ ಸೆಮಿಸ್ಟರ್ನ ಪರೀಕ್ಷೆಗೆ ಬಾಹ್ಯವಾಗಿ ನೋಂದಣಿ ಮಾಡಿಕೊಂಡಿದ್ದ ಪಟ್ಟಣದ ಹಲವು ವಿದ್ಯಾರ್ಥಿಗಳು ಪರೀಕ್ಷಾ ಸಮಯದ ಬದಲಾಗಿದ್ದರಿಂದ ಪರೀಕ್ಷೆಯಿಂದ ವಂಚಿತರಾದರು.
ಪಟ್ಟಣದ ಆರ್.ಎನ್. ದೇಶಪಾಂಡೆ ಸರ್ಕಾರಿ ಪದವಿ ಕಾಲೇಜ್ನಲ್ಲಿ ಬಾಹ್ಯ ಅಭ್ಯರ್ಥಿಗಳಾಗಿ 10 ವಿದ್ಯಾರ್ಥಿಗಳು ಪ್ರವೇಶ ಪತ್ರ ಪಡೆದಿದ್ದರು. ಆ ಪತ್ರದಲ್ಲಿ ಇತಿಹಾಸ ವಿಷಯದ ಪರೀಕ್ಷೆ ಮಾ.2 ಮಧ್ಯಾಹ್ನ 2ರಿಂದ 5ಗಂಟೆ ವರೆಗೆ ಎಂದು ನಿಗದಿಯಾಗಿತ್ತು. ವಿದ್ಯಾರ್ಥಿಗಳು ಪ್ರವೇಶ ಪತ್ರ ಪಡೆದ ನಂತರ ಸಮಯ ಬದಲಾಯಿಸಲಾಗಿದ್ದು, ಬೆಳಿಗ್ಗೆ 9ರಿಂದ 12ಗಂಟೆ ವರೆಗೆ ನಿಗದಿಪಡಿಸಲಾಗಿದೆ. ಈ ಮಾಹಿತಿ ಇಲ್ಲದ ವಿದ್ಯಾರ್ಥಿಗಳು 11.30ಕ್ಕೆ ಮತ್ತೆ ಕೆಲವರು ಮಧ್ಯಾಹ್ನ 1ಗಂಟೆಗೆ ಕಾಲೇಜಿಗೆ ಬಂದಿದ್ದಾರೆ.
‘ಪಟ್ಟಣದ ಕೆಲವು ವಿದ್ಯಾರ್ಥಿಗಳಿಗಷ್ಟೇ ಪ್ರಾಚಾರ್ಯರು ವಿಷಯ ತಿಳಿಸಿದ್ದಾರೆ. ಹಾಜರಾತಿ ಪತ್ರದಲ್ಲಿ ಸಹಿ ಮಾಡಿಸಿಕೊಂಡು ಉತ್ತರ ಪತ್ರಿಕೆಗೆ ನೋಂದಣಿ ಸಂಖ್ಯೆ ಹಾಕಿಸಿ ಕಳುಹಿಸಲಾಗಿದೆ. ಪರೀಕ್ಷೆ 9ಕ್ಕೆ ಇದ್ದದ್ದರಿಂದ ತಡವಾಗಿ (12ಗಂಟೆಯೊಳಗೆ) ಬಂದ ಕೆಲವರಿಗೆ ಅರ್ಧ ತಾಸು ಮಾತ್ರ ಅವಕಾಶ ದೊರೆತಿದೆ. ಮಧ್ಯಾಹ್ನ 12ರ ನಂತರ ಬಂದವರಿಗೆ ಆ ಅವಕಾಶವೇ ದೊರೆತಿಲ್ಲ.
‘ಪರೀಕ್ಷಾ ಸಮಯ ಬದಲಾದ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಪ್ರವೇಶ ಪತ್ರದಲ್ಲಿದ್ದ ಸಮಯಕ್ಕೆ ಕಾಲೇಜ್ಗೆ ಹಾಜರಾಗಿದ್ದೇವೆ. ಪ್ರಾಂಶುಪಾಲರು ಸಂದೇಶ ಹಾಕಿರುವ ವಾಟ್ಸ್ಆಪ್ ಗುಂಪಿನಲ್ಲಿ ನಾವಿಲ್ಲ. ಆದರೂ ಕೆಲವರನ್ನು ಕರೆದು ಸಹಿ ಮಾಡಿಸಿಕೊಂಡು, ಉತ್ತರಪತ್ರಿಕೆಗೆ ನಂಬರ್ ಹಾಕಿಸಿಕೊಂಡು ಕಳುಹಿಸಿದ್ದಾರೆ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ವೇಳಾಪಟ್ಟಿಯನ್ನು ಕರ್ನಾಟಕ ವಿಶ್ವವಿದ್ಯಾಲಯವೇ ಬದಲಾಯಿಸಿದೆ. ಈ ಕುರಿತು ಮಾಹಿತಿಯನ್ನು ಕಾಲೇಜಿನ ಸೂಚನಾ ಫಲಕಕ್ಕೆ ಹಾಕಿದ್ದೇವೆ. ವಾಟ್ಸ್ ಆಪ್ ಗುಂಪಿನಲ್ಲಿಯೂ ವಿಷಯ ತಿಳಿಸಲಾಗಿದೆ. ಆದರೆ, ಈ ವಿದ್ಯಾರ್ಥಿಗಳು ಆ ಗುಂಪಿನಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ.
| ಎಸ್.ಪ್ರಸನ್ನ, ಪ್ರಾಚಾರ್ಯ ಆರ್.ಎನ್. ದೇಶಪಾಂಡೆ ಸರ್ಕಾರಿ ಕಾಲೇಜು