ಬೆಂಗಳೂರು: ಬಿಎಂಶ್ರೀ ಪ್ರತಿಷ್ಠಾನ ವತಿಯಿಂದ ನೀಡಲಾಗುವ 2024ನೇ ಸಾಲಿನ ‘ಪ್ರೊ. ಎಲ್.ಎಸ್. ಶೇಷಗಿರಿರಾವ್ ವಿಮರ್ಶಾ ಪ್ರಶಸ್ತಿ’ಗೆ ಹಿರಿಯ ವಿಮರ್ಶಕ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಮತ್ತು ‘ಶ್ರೀ ವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತ ಈಶ್ವರ ದೈತೋಟ ಭಾಜನರಾಗಿದ್ದಾರೆ.
ಪ್ರಶಸ್ತಿಗಳು ತಲಾ 10 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದ್ದು, ಸೋಮವಾರ (ಫೆ. 19) ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಕೆ. ಮರುಳಸಿದ್ದಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಾಹಿತಿ ಪ್ರೊ. ಶಿವರಾಮಯ್ಯ, ಕವಿ ಎಲ್.ಎನ್. ಮುಕುಂದರಾಜ್, ಪತ್ರಕರ್ತರಾದ ಶಿವಾನಂದ ತಗಡೂರು, ಸದಾಶಿವ ಶೆಣೈ ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿದ್ದರು ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ. ಶಾಂತರಾಜು ತಿಳಿಸಿದ್ದಾರೆ.