ತಿರುವನಂತಪುರಂ: ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಶ್ರೀಅಯ್ಯಪ್ಪ ಸನ್ನಿಧಿಯಲ್ಲಿ ಧಾರ್ಮಿಕ ಚಟುವಟಿಕೆ ಪ್ರತಿವರ್ಷದಂತೆ ಈ ಸಲ ಮತ್ತೆ ಚುರುಕುಗೊಂಡಿದ್ದು, ಭಕ್ತರ ಆಗಮನ ಪ್ರಮಾಣ ಹೆಚ್ಚಳಗೊಂಡಿದೆ. ಆದರೆ ಕರೊನಾ ಹಾವಳಿ ಎಲ್ಲ ಕ್ಷೇತ್ರಗಳಂತೆ ಶಬರಿ ಮಲೆಗೂ ತಟ್ಟಿದ್ದು, ಎಂದಿನ ಸಂಪ್ರದಾಯದಲ್ಲಿ ಬದಲಾವಣೆ ಮಾಡಲಾಗಿದೆ.
ಶಬರಿಮಲೆಯಲ್ಲಿ ಸುಮಾರು 2 ತಿಂಗಳ ಕಾಲ ನಡೆಯುವ ಉತ್ಸವ ನ. 15ರಿಂದಲೇ ಆರಂಭಗೊಂಡಿದ್ದು, 2021ರ ಜ. 14ರ ವರೆಗೂ ನಡೆಯಲಿದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದ್ದು, ಭಕ್ತರು ಅದನ್ನು ಪಾಲಿಸಬೇಕು ಎಂಬುದಾಗಿ ಶಬರಿಮಲೆಯ ಉಸ್ತುವಾರಿ ವಹಿಸಿರುವ ಟ್ರಾವಂಕೂರ್ ದೇವಸ್ಥಾನಂ ಬೋರ್ಡ್(ಟಿಡಿಬಿ) ಅಧ್ಯಕ್ಷ ಎನ್. ವಾಸು ತಿಳಿಸಿದ್ದಾರೆ.
ಭಕ್ತರೆಲ್ಲರೂ ವರ್ಚುವಲ್ ಕ್ಯೂ ಸಿಸ್ಟಮ್ಗೆ ಮೊದಲೇ ನೋಂದಣಿ ಮಾಡಿಕೊಂಡಿರಬೇಕು. ಅಲ್ಲದೆ ಆಗಮಿಸುವ ಎಲ್ಲರ ಬಳಿ 24 ಗಂಟೆಗಳ ಒಳಗೆ ಪರೀಕ್ಷೆ ನಡೆಸಿರುವ ಕರೊನಾ ನೆಗೆಟಿವ್ ಪ್ರಮಾಣಪತ್ರ ಇರಬೇಕು. ಎಲ್ಲಕ್ಕಿಂತ ಹೆಚ್ಚು ಈ ಸಲ ಶಬರಿಮಲೆಯಲ್ಲಿ ಪವಿತ್ರ ಪಂಪಾ ಸ್ನಾನ ನಿಷೇಧಿಸಲಾಗಿದೆ. ನದಿಯಲ್ಲಿ ಮುಳುಗಿ ತೀರ್ಥಸ್ನಾನ ಮಾಡಲು ಅವಕಾಶವಿಲ್ಲ. ಆದರೆ ಭಕ್ತರು ಬೆಟ್ಟವನ್ನು ಏರುವ ಮೊದಲು ಪಂಪಾತೀರ್ಥದ ಶವರ್ ಪಡೆಯುವಂಥ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಮಹಿಳೆಯರಿಗೆ ವಿಧಿಸಿರುವ ನಿಗದಿತ ನಿರ್ಬಂಧ ಕಟ್ಟುನಿಟ್ಟಾಗಿ ಇರಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಸ್ನೇಕ್ ಡ್ಯಾನಿ ದುರಂತ ಸಾವು: 75 ಬಾರಿ ಬಚಾವ್ ಆದ್ರೂ ಬೆಂಬಿಡದ ಮೃತ್ಯು!