ಬೆಂಗಳೂರು: ಕರೊನಾ ವೈರಸ್ ಬಗ್ಗೆ ಅರಿವು ಮೂಡಿಸಿ, ಯಾರಿಗಾದರೂ ಕಾಯಿಲೆಯ ಲಕ್ಷಣಗಳು ಬಂದಿದ್ದರೆ ಅವರನ್ನು ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲು, ಕ್ವಾರಂಟೈನ್ನಲ್ಲಿ ಇರುವವರ ಬಗ್ಗೆ ನಿಗಾ ವಹಿಸುವ ಕೆಲಸವನ್ನು ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ರಾಜ್ಯದೆಲ್ಲೆಡೆ ಮಾಡುತ್ತಿದ್ದಾರೆ. ಅದಕ್ಕೆ ಜನರು ಸಹಕರಿಸುವುದು ಕಡ್ಡಾಯ.
ಆದರೆ ಬೆಂಗಳೂರಿನ ಸಾಧಿಕ್ ಪಾಳ್ಯದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಕರೊನಾ ಸರ್ವೇಗಾಗಿ ಹೋಗಿದ್ದ ಆಶಾ ಕಾರ್ಯಕರ್ತೆಯರು, ನರ್ಸ್ಗಳು, ಆರೋಗ್ಯ ಕಾರ್ಯಕರ್ತರ ಮೇಲೆ ಮುಸ್ಲಿಮರು ದಾಳಿ ನಡೆಸಿದ್ದಾರೆ. ನೀವೆಲ್ಲ ಯಾಕೆ ಬಂದಿದ್ದೀರಿ, ಮನೆಗೆ ಹೋಗ್ತಾ ಇರಬೇಕು ಎಂದು ಆವಾಜ್ ಹಾಕಿದ್ದಾರೆ. ಮೊಬೈಲ್, ಬ್ಯಾಗ್ಗಳನ್ನು ಕಿತ್ತುಕೊಂಡು ದೌರ್ಜನ್ಯ ತೋರಿಸಿದ್ದಾರೆ.
ಸಾಧಿಕ್ ಪಾಳ್ಯದಲ್ಲಿ ಏನು ನಡೆಯಿತು ಎಂಬ ಬಗ್ಗೆ ದಾಳಿಗೆ ಒಳಗಾದ ಆಶಾಕಾರ್ಯಕರ್ತೆ ಕೃಷ್ಣವೇಣಿ ಕಣ್ಣೀರು ಹಾಕುತ್ತ ವಿಡಿಯೋದಲ್ಲಿ ತಿಳಿಸಿದ್ದಾರೆ.
ನಾವು ಸಾಧಿಕ್ ಪಾಳ್ಯಕ್ಕೆ ಕರೊನಾ ವೈರಸ್ ಸರ್ವೇಗಾಗಿ ಹೋಗಿದ್ದೆವು. ಆದರೆ ಅಲ್ಲಿ ನಮ್ಮನ್ನು ಮುತ್ತಿಗೆ ಹಾಕಿ ಹಿಡಿದುಕೊಂಡರು. ಎಲ್ಲರೂ ಬೈಯ್ಯಲು ಶುರು ಮಾಡಿದರು. ಮೊಬೈಲ್, ಬ್ಯಾಗ್ಗಳನ್ನು ಕಿತ್ತುಕೊಂಡು ಯಾರಿಗೆ ಹೇಳ್ತಿರೋ ಹೇಳಿ..ಮನೆಗೆ ಹೋಗ್ತಾ ಇರಿ ಎಂದು ಆವಾಜ್ ಹಾಕಿದರು. ಯಾರಿಗೂ ಫೋನ್ ಮಾಡಲು ಬಿಡಲಿಲ್ಲ. ತುಂಬ ಬೇಜಾರು ಆಯಿತು ಎಂದು ಅಳಲು ತೋಡಿಕೊಂಡಿದ್ದಾರೆ.
ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಏನೂ ಕಷ್ಟ ಆಗಿರಲಿಲ್ಲ. ಕರೊನಾ ವೈರಸ್ ಬಂದಮೇಲೆ ಮನೆಮನೆಗೆ ಹೋಗಿ ಬೈಸಿಕೊಂಡು ಬರುವಂತಾಗಿದೆ. ನಾವು ಕೇಳುವ ಪ್ರಶ್ನೆಗಳಿಗೆ ಯಾರೂ ಏನೂ ಉತ್ತರಿಸುತ್ತಿಲ್ಲ. ಬೇಸರ ಮಾಡಿ ಕಳಿಸುತ್ತಿದ್ದಾರೆ.
ಈ ಸಾಧಿಕ್ ಪಾಳ್ಯ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ನೂರು ಜನ ಬಂದು ಮುತ್ತಿಕೊಂಡರು. ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡರು ಯಾರಿಗೆ ಹೇಳಲೂ ಆಗಲಿಲ್ಲ. ಆದರೂ ಕೊನೆಗೆ ನಾವು ವೈದ್ಯರಿಗೆ, ನಮ್ಮ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದೆವು. ಅವರೂ ಬಂದು ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಿದರು ಎಂದು ಕೃಷ್ಣವೇಣಿ ಘಟನೆಯ ವಿವರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನಾವೆಲ್ಲ ಕರೊನಾ ಸರ್ವೇಗಾಗಿ ಸಾಧಿಕ್ ಲೇಔಟ್ಗೆ ಹೋಗುತ್ತಿದ್ದಂತೆ ಅಲ್ಲಿನ ಮಸೀದಿಯಿಂದ ಅನೌನ್ಸ್ಮೆಂಟ್ ಹೊರಬಿತ್ತು. ಅದನ್ನು ಕೇಳಿದ ಕೂಡಲೇ ಅನೇಕರು ಬಂದು ನಮ್ಮನ್ನು ಮುತ್ತಿಕೊಂಡರು. ಹಾಗಾಗಿ ಮಸೀದಿಯಲ್ಲಿ ಅನೌನ್ಸ್ ಮಾಡಿದವರನ್ನು ಮೊದಲು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಜನರ ಆರೋಗ್ಯ ಚೆನ್ನಾಗಿರಲಿ ಎಂದು ನಾವು ಪ್ರಯತ್ನಿಸಿದರೆ, ಅವರು ನಮ್ಮ ಮೇಲೆಯೇ ದಾಳಿ ಮಾಡುತ್ತಾರೆ ಎಂದು ಕಣ್ಣೀರು ಹಾಕಿದರು.
ಬೆಂಗಳೂರಿನ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ- ಎಚ್ಚರಿಕೆ ನೀಡಿದ್ರು ಸಚಿವ ಶ್ರೀರಾಮುಲು
ಬೆಂಗಳೂರಿನ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ- ಎಚ್ಚರಿಕೆ ನೀಡಿದ್ರು ಸಚಿವ ಶ್ರೀರಾಮುಲು