ಗುವಾಹಟಿ (ಅರುಣಾಚಲ ಪ್ರದೇಶ): ಲಾಕ್ಡೌನ್ನಿಂದಾಗಿ ಬಡವರು ಉಪವಾಸ ಬೀಳಬಾರದು ಎಂದು ಸರ್ಕಾರಗಳು ಎಲ್ಲರಿಗೂ ರೇಷನ್ ಹಂಚುವ ಕೆಲಸ ಮಾಡುತ್ತಿದ್ದರೂ, ಅದೆಷ್ಟೋ ಕಡೆ ಅರ್ಹರಿಗೆ ಅಕ್ಕಿ, ಬೇಳೆ ಸಿಗದೇ ಪರದಾಡುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ.
ಈ ನಡುವೆಯೇ, ಅಕ್ಕಿ ಖಾಲಿಯಾಗಿದೆ ಎಂದು ಗುವಾಹಟಿಯ ಒಂದಿಷ್ಟು ಅಪ್ರಾಪ್ತ ವಯಸ್ಸಿನ ಮಕ್ಕಳು ಮಾಡಿರುವ ಕೃತ್ಯ ಕೇಳಿದರೆ ಎಂಥವರೂ ಬೆಚ್ಚಿ ಬೀಳುವುದು ಗ್ಯಾರೆಂಟಿ. ಅದೂ ಅವರ ಹಬ್ಬದೂಟವಂತೆ! ಅಷ್ಟಕ್ಕೂ ಈ ಮಕ್ಕಳು ಮಾಡಿದ್ದೇನು ಗೊತ್ತಾ?
ಗುವಾಹಟಿಯ ಅರಣ್ಯ ಪ್ರದೇಶದ ಸಮೀಪ ವಾಸಿಸುತ್ತಿರುವ ಮಕ್ಕಳಿವರು. ಬೇಟೆಯಲ್ಲಿ ನಿಸ್ಸೀಮರು. ಅಲ್ಲಿ ಈಗ ಸ್ಥಳೀಯ ಹಬ್ಬವಂತೆ. ಈ ಹಬ್ಬಕ್ಕೆ ಏನಾದರೂ ಭರ್ಜರಿ ಊಟ ಮಾಡುವ ಆಸೆ ಅವರದ್ದು. ಆದರೆ ಅವರೇ ಹೇಳುವಂತೆ ಲಾಕ್ಡೌನ್ನಿಂದಾಗಿ ಅಕ್ಕಿ ಖಾಲಿಯಾಗಿದೆಯಂತೆ. ‘ಮನೆಯಲ್ಲಿ ಅಕ್ಕಿ ಖಾಲಿಯಾಗಿತ್ತು. ಲಾಕ್ಡೌನ್ನಿಂದಾಗಿ ಎಲ್ಲಿಯೂ ಸದ್ಯ ಅಕ್ಕಿ ಸಿಗುವಂತಿರಲಿಲ್ಲ. ಇಲ್ಲಿ ಹಬ್ಬ ಬೇರೆ. ಹೊಟ್ಟೆ ಹಸಿದ ಕಾರಣ, ಕಾಡಿನಲ್ಲಿ ಏನಾದರೂ ಸಿಗುತ್ತದೆ ಎಂದು ಹುಡುಕುತ್ತಾ ಹೊರಟೆವು. ಆಹಾ! ನಮ್ಮ ಊಟ ಸಿಕ್ಕಿಯೇ ಬಿಟ್ಟಿತು, ಅದನ್ನೇ ತಂದು ತಿಂದಿದ್ದೇವೆ’ ಎಂದು ಹೇಳುವ ಮಕ್ಕಳು ತಂದದ್ದು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು!
ಮೂವರು ಮಕ್ಕಳು ಕಾಳಿಂಗ ಸರ್ಪವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದಾರೆ. ನಂತರ ಅದನ್ನು ಕೊಂದಿದ್ದಾರೆ. ಬಾಳೆಯ ಎಲೆಯ ಮೇಲೆ ಅದನ್ನಿಟ್ಟು ಪೀಸ್ ಪೀಸ್ ಮಾಡಿ ತಿಂದು ಹಬ್ಬದೂಟ ಮಾಡಿದ್ದಾರೆ! ಅಲ್ಲಿರುವ ಇನ್ನು ಕೆಲವರೂ ಈ ಕಾಳಿಂಗ ಸರ್ಪವನ್ನು ತಿಂದು ಬಾಯಿ ಚಪ್ಪರಿಸಿದ್ದಾರೆ.
ಕಾಳಿಂಗ ಸರ್ಪವನ್ನು ತಿಂದು ಹಬ್ಬ ಮಾಡಿರುವ ವೀಡಿಯೋ ಮಾಡಲಾಗಿದ್ದು, ಅದೀಗ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಪೊಲೀಸರು ಈ ಯುವಕರ ವಿರುದ್ಧ ಕೇಸು ದಾಖಲಿಸಿದ್ದಾರೆ.ವಿರುದ್ಧ ವನ್ಯಜೀವಿ ರಕ್ಷಣಾ ಕಾಯ್ದೆಯ ಪ್ರಕಾರ ಕಾಳಿಂಗ ಸರ್ಪವನ್ನು ಕೊಲ್ಲುವುದು ಗಂಭೀರ ಅಪರಾಧವಾಗಿದ್ದು, ಇದಕ್ಕೆ ಜಾಮೀನು ಇಲ್ಲ.
ಹಸಿವನ್ನು ನೀಗಿಸಿಕೊಳ್ಳಲು ಬೇರೆ ದಾರಿ ಇರಲಿಲ್ಲ, ಅದಕ್ಕಾಗಿ ಹೀಗೆ ಮಾಡಿದ್ದೇವೆ, ನಮ್ಮನ್ನು ಬಿಟ್ಟುಬಿಡಿ ಎಂದು ಸ್ಥಳೀಯರು ಕೇಳಿಕೊಂಡಿದ್ದಾರೆ. ಆದರೆ ಕಾನೂನಿನ ಅಡಿ ಇದು ಅಪರಾಧವಾಗಿರುವ ಕಾರಣ, ಹಬ್ಬದೂಟ ಮಾಡಿದವರು ಪೊಲೀಸರ ಅತಿಥಿಗಳಾಗಿದ್ದಾರೆ!
ಈ ಹಿಂದೆ ಬಿಹಾರ್ನ ಜೆಹಾನ್ಬಾದ್ನಲ್ಲಿ ಇದೇ ರೀತಿ ಕಾಡಿನಂಚಿನಲ್ಲಿ ಇರುವ ಜನರು ಹಸಿವಿನಿಂದ ಕಪ್ಪೆಗಳನ್ನು ತಿಂದದ್ದು ವರದಿಯಾಗಿದೆ. (ಏಜೆನ್ಸೀಸ್)