ಅರಕೇರಾ: ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಪಟ್ಟಣದ ಜುಟಮರಡಿ ಬಳಿಯ ವಿದ್ಯುತ್ ವಿತರಣಾ ಕೇಂದ್ರದ ಮುಂದೆ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
15 ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಯವಾಗುತ್ತಿದೆ. ಇದರಿಂದ ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಬೆಳೆಯುವ ಹಂತದಲ್ಲಿರುವ ಬೆಳೆಗಳಿಗೆ ನೀರು ಹರಿಸಲು ತೊಂದರೆ ಉಂಟಾಗಿದೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇದನ್ನು ಓದಿ: ಟೋಲ್ ಪಾವತಿಸಿ ಎಂದು ಹೇಳಿದ್ದೇ ತಪ್ಪಾಯ್ತ?; ಸಿಬ್ಬಂದಿ ಕೂದಲನ್ನು ಎಳೆದಾಡಿದ ಮಹಿಳೆ; ವಿಡಿಯೋ ವೈರಲ್!
ಕಾದಿಗ್ಗೇರಾ, ಜಾಗೀರ ಜಾಡಲದಿನ್ನಿ ವ್ಯಾಪ್ತಿಯಲ್ಲಿ ಮರಾಟ ಗ್ರಾಮದ 500 ಎಕರೆ ಜಮೀನುಗಳಿಗೆ ಸಮರ್ಪಕ ನೀರಾವರಿ ಸೌಲಭ್ಯ ಇಲ್ಲದೆ ರೈತರು ಕೊಳವೆಬಾವಿ ಮತ್ತು ತೆರೆದ ಬಾವಿಗಳನ್ನು ಅವಲಂಬಿಸಿದ್ದೇವೆ. ವಿದ್ಯುತ್ ಪೂರೈಕೆ ಸಮಸ್ಯೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟಕ್ಕೀಡಾಗುವ ಆತಂಕ ಇದೆ.
7 ರಿಂದ 8 ತಾಸು ಗುಣಮಟ್ಟದ ವಿದ್ಯುತ್ ಪೂರೈಸುವ ಬದಲು ಮೂರರಿಂದ ನಾಲ್ಕು ಗಂಟೆ ಮಾತ್ರ ಕರೆಂಟ್ ನೀಡಲಾಗುತ್ತಿದೆ. ಇದರಿಂದ ಬೆಳೆ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಕೂಡಲೇ ಜೆಸ್ಕಾಂನವರು ಸಮರ್ಪಕ ವಿದ್ಯುತ್ ಪೂರೈಕೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಕರಿಯಪ್ಪ, ಶರಣಪ್ಪ, ಸಿದ್ದಪ್ಪ, ಆಂಜನೇಯ, ಪರಶುರಾಮ, ಶಿವರಾಜ, ಮುದುಕಪ್ಪ, ರಾಮಣ್ಣ, ಬಸವರಾಜ, ದುರ್ಗಪ್ಪ, ರಮೇಶ ಇತರರಿದ್ದರು.
ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಜನ-ಜಾನುವಾರುಗಳ ಕುಡಿವ ನೀರಿಗೆ ತೊಂದರೆಯಾಗಿದೆ. ಬೆಳಗಳು ಸಹ ಒಣಗುತ್ತಿವೆ. ಜೆಇ ಅವರನ್ನು ಸಂಪರ್ಕಿಸಿದರೆ ನಿಮ್ಮ ವ್ಯಾಪ್ತಿಯ ಲೈನ್ಮನ್ಗೆ ಹೇಳಿ ಎಂದು ನಿರಾಶಾದಾಯಕ ಉತ್ತರ ನೀಡುತ್ತಿದ್ದಾರೆ. ಇದಕ್ಕೆ ಬೇಸತ್ತು ಕೆಇಬಿಗೆ ಮುತ್ತಿಗೆ ಹಾಕಿದ್ದೇವೆ.
ರಮೇಶಮರಾಟ ಗ್ರಾಮದ ರೈತ
ಲೈನ್ಮನ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪವಿದೆ. ಇದರಿಂದ ತೊಂದರೆ ಉಂಟಾಗಿದೆ. ವಿದ್ಯುತ್ ಪೂರೈಕೆ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುತ್ತದೆ.
ನಜೀರ್ಸಾಬ್
ಜೆಇ, ಕೆಇಬಿ ಜುಟಮರಡಿ