ಇಂಫಾಲ್: ಮಣಿಪುರದಲ್ಲಿ ಭಾರತೀಯ ಸೇನೆಯ ಕಾನ್ವಾಯ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಅಸ್ಸಾಂ ರೈಫಲ್ಸ್ನ ಕರ್ನಲ್ ಮತ್ತು ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ. ಮೃತ ಕರ್ನಲ್ ವಿಪ್ಲವ್ ತ್ರಿಪಾಠಿಯೊಂದಿಗೆ ಪ್ರಯಾಣಿಸುತ್ತಿದ್ದ ಅವರ ಪತ್ನಿ ಮತ್ತು ಪುತ್ರ ಕೂಡ ಈ ಘಟನೆಯಲ್ಲಿ ಸಾವಪ್ಪಿದ್ದಾರೆ.
ಅಸ್ಸಾಂ ರೈಫಲ್ಸ್ನ ಕಮಾಂಡಿಂಗ್ ಅಧಿಕಾರಿಯಾದ ಕರ್ನಲ್ ವಿಪ್ಲವ್ ತ್ರಿಪಾಠಿ ಅವರು ಇಂದು ಬೆಳಿಗ್ಗೆ ರಾಜ್ಯದ ಚೂರಚಂದ್ಪುರ್ ಜಿಲ್ಲೆಯ ಸಿಂಘತ್ ಉಪವಿಭಾಗದಲ್ಲಿನ ನಾಗರಿಕಾ ಕ್ರಿಯಾ ಯೋಜನೆಯ ಮೇಲ್ವಿಚಾರಣೆ ಮಾಡಿ ಹೆಡ್ ಕ್ವಾರ್ಟರ್ಸ್ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಉಗ್ರರ ಗುಂಪೊಂದು ಇಂದು(ನ.13) ಬೆಳಿಗ್ಗೆ 10 ಗಂಟೆ ವೇಳೆಗೆ ಸೇನೆಯ ಕಾನ್ವಾಯ್ ಮೇಲೆ ಐಇಡಿ ಬ್ಲಾಸ್ಟ್ ಮಾಡಿ ಗುಂಡು ಹಾರಿಸಿತು ಎನ್ನಲಾಗಿದೆ.
ಇದನ್ನೂ ಓದಿ: ಕೈ ಪಕ್ಷದಿಂದ ಮತ್ತೊಂದು ಕಪಾಳಮೋಕ್ಷ; ಸಿದ್ದರಾಮಯ್ಯ ಅಭಿಮಾನಿಯ ಕೆನ್ನೆಗೆ ಬಾರಿಸಿದ ಮಾಜಿ ಸಚಿವ…
ತಮ್ಮ ಪತ್ನಿ-ಪುತ್ರನ ಜೊತೆ ತೆರಳಿದ್ದ ತ್ರಿಪಾಠಿ ಜೊತೆಗಿದ್ದ ಮೂವರು ಪಾರಾ ಮಿಲಿಟರಿ ಸೈನಿಕರು ಮೃತಪಟ್ಟರು. ಅವರ ವಾಹನದ ಚಾಲಕ ಕೂಡ ಕೊಲ್ಲಲ್ಪಟ್ಟಿದ್ದು, ಉಗ್ರರು ಒಟ್ಟು ಏಳು ಜನರನ್ನು ಬಲಿ ಪಡೆದಿದ್ದಾರೆ. ಯಾವುದೇ ಉಗ್ರ ಸಂಘಟನೆಯು ಈ ಅಟ್ಯಾಕ್ನ ಜವಾಬ್ದಾರಿ ತೆಗೆದುಕೊಂಡಿಲ್ಲ. ಆದರೆ, ಮಣಿಪುರದ ಪೀಪಲ್ಸ್ ಲಿಬರೇಷನ್ ಆರ್ಮಿ ಈ ದಾಳಿಯ ಹಿಂದಿದೆ ಎಂದು ಶಂಕಿಸಲಾಗಿದೆ.
ಮಣಿಪುರ ಸಿಎಂ ಎನ್.ಬೀರೆನ್ ಸಿಂಗ್ ಪ್ರತಿಕ್ರಿಯಿಸಿದ್ದು, “ಈ ಹೇಡಿತನದ ಹಲ್ಲೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯ ಪೊಲೀಸರು ಮತ್ತು ಪಾರಾಮಿಲಿಟರಿ ಪಡೆಗಳು ಆ ಉಗ್ರವಾದಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ದಾಳಿಯನ್ನು ಖಂಡಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ. (ಏಜೆನ್ಸೀಸ್)
1947ರಲ್ಲಿ ಯಾವ ಯುದ್ಧ ನಡೆಯಿತು ಹೇಳಿದರೆ, ಪದ್ಮಶ್ರೀ ವಾಪಸ್ ಕೊಡುವೆ ಎಂದ ಕಂಗನಾ