ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಇತ್ತೀಚೆಗೆ ಹೃದಯಾಘಾತವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಹೊಸ ಸುದ್ದಿ ಏನೆಂದರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಸದ್ಯದಲ್ಲೇ ಕೆಲಸಕ್ಕೆ ಹಾಜರಾಗಲಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅರ್ಜುನ್ ಜನ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಮುಂದಿನ 10 ರಿಂದ 15 ದಿನಗಳೊಳಗೆ ಕೆಲಸಕ್ಕೆ ವಾಪಸ್ ಆಗಲಿದ್ದಾರೆ. ಸದ್ಯ ಅವರು ಮುಂದಿನ ಸಿನಿಮಾಗಳ ಕೆಲಸಗಳನ್ನು ಫೋನ್ ಮೂಲಕವೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಆರೋಗ್ಯದ ತೊಂದರೆಯಿಂದ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಚಟುವಟಿಕೆಗಳಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಅವರು ಆರೋಗ್ಯ ಚೇತರಿಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಶೀಘ್ರದಲ್ಲೇ ಆರೋಗ್ಯ ಸುಧಾರಣೆಯಾಗುವ ವಿಶ್ವಾಸದಲ್ಲಿರುವ ಅವರು, ಮತ್ತೆ ಎಂದಿನಂತೆ ಸಂಗೀತ ಸಂಯೋಜನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
ಅರ್ಜುನ್ ಅವರಿಗೆ ಹೃದಯಾಘಾತ ಯಾಕಾಯಿತು ಎಂಬುದರ ಬಗ್ಗೆ ಮಾತನಾಡದ ಅವರ ಆಪ್ತರು, ‘ಅವರಿಗೆ ಅಂತಹ ಒತ್ತಡ ಏನೂ ಇರಲಿಲ್ಲ. ಈಗ ಹಬ್ಬಿರುವ ಸುದ್ದಿಗಳೆಲ್ಲ ಸುಳ್ಳು’ ಎಂಬ ಸ್ಪಷ್ಟನೆ ನೀಡುತ್ತಾರೆ.