ಬೆಂಗಳೂರು: ದಿನದಿಂದ ದಿನಕ್ಕೆ ಅಡಿಕೆಯ ಮೌಲ್ಯವರ್ಧನೆ ಹಿನ್ನೆಲೆಯಲ್ಲಿ ಸಾಕಷ್ಟು ಉಪ&ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ. ಇದೀಗ ಪುತ್ತೂರಿನ ಸುಹಾಸ್ ಮರಿಕೆ ಎಂಬುವವರು ಅಡಿಕೆಯಿಂದ ಐಸ್ಕ್ರೀಂ ತಯಾರಿಸಿದ್ದಾರೆ. ಸದ್ಯ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳಕೂಟಕ್ಕೆ ಬಂದಿರುವ ಜನರು ಅಡಿಕೆ ರುಚಿಯ ಐಸ್ಕ್ರೀಂ ಸವಿದಿದ್ದಾರೆ.
ಅಡಿಕೆಯನ್ನು ನಾನಾ ಹಂತಗಳಲ್ಲಿ ಸಂಸ್ಕರಿಸಿ, ಐಸ್ಕ್ರೀಂ ಸಿದ್ಧಪಡಿಸಲಾಗುತ್ತದೆ. ಈ ಸ್ವಾದವನ್ನು ಎಲ್ಲ ವಯೋಮಾನದವರು ಸವಿಯಬಹುದು. ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಇದು ನ್ಯಾಚುರಲ್ ಐಸ್ಕ್ರೀಂ ಆಗಿದ್ದು, ಸಹಜ ಬಣ್ಣ ಹೊಂದಿದೆ. ರುಚಿ ಹೆಚ್ಚಿಸುವ ಯಾವುದೇ ಪದಾರ್ಥಗಳನ್ನು ಬಳಸುವುದಿಲ್ಲ ಎನ್ನುತ್ತಾರೆ ಸುಹಾಸ್ ಮರಿಕೆ.
ಕರಾವಳಿ ತಿನಿಸಿಗೆ ಮುಗಿಬಿದ್ದ ಜನ…
ಕರಾವಳಿಯ ತಿಂಡಿ&ತಿನಿಸುಗಳನ್ನು ಸವಿಯಲು ಕಂಬಳಕ್ಕೆ ಬಂದಿದ್ದ ಮಂದಿ ಮುಗಿಬಿದ್ದರು. ಮಂಗಳೂರು ಬನ್ಸ್, ಬಜ್ಜಿ, ತುಪ್ಪ ದೋಸೆ, ಗೋಳಿ ಬಜೆ, ಪುಂಡಿ ಗಸಿ, ಕೋರಿ ರೊಟ್ಟಿ, ಮೀನಿನ ವಿವಿಧ ಖಾದ್ಯಗಳನ್ನು ಸವಿದರು. ಹೀಗಾಗಿ ಬೆಳಗ್ಗಿನಿಂದಲೇ ಫುಡ್ಕೋರ್ಟ್ನಲ್ಲಿ ಹೆಚ್ಚಿನ ಜನರಿದ್ದರು. ಸಂಜೆಯಾಗುತ್ತಿದ್ದಂತೆ ದಟ್ಟಣೆ ಹೆಚ್ಚಾಗುತ್ತಾ ಹೋಯಿತು.