ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿಗಳನ್ನು ಇದೇ ಮೊದಲ ಬಾರಿಗೆ ಆನ್ಲೈನ್ ಮೂಲಕ ಆಹ್ವಾನಿಸಿದೆ. ರಾಜ್ಯದ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಇಷ್ಟು ವರ್ಷ ಆಫ್ಲೈನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರ ರಾಷ್ಟ್ರಮಟ್ಟದ ಪ್ರಶಸ್ತಿಗೆ ಜಾರಿಗೆ ತಂದಿರುವ ಆನ್ಲೈನ್ ಮಾದರಿಯಲ್ಲೇ ಇದು ಕೂಡ ಇರಲಿದೆ. ಅರ್ಜಿ ಸಲ್ಲಿಕೆಯಿಂದ ಆಯ್ಕೆ ಸಮಿತಿಗಳ ಶಿಫಾರಸು ಪ್ರಕ್ರಿಯೆ ಹಾಗೂ ರಾಜ್ಯ ಮಟ್ಟದ ಆಯ್ಕೆ ಸಮಿತಿ ಕೈಗೊಳ್ಳುವ ಅಂತಿಮ ಆಯ್ಕೆ ಪಟ್ಟಿವರೆಗೆ ಎಲ್ಲ ಪ್ರಕ್ರಿಯೆಗಳು ಆನ್ಲೈನ್ ಮೂಲಕವೇ ನಡೆಯಲಿದೆ.
ಇದನ್ನೂ ಓದಿ: ನೂತನ ಸಿಎಂ ಬೊಮ್ಮಾಯಿಗೆ ಮೋದಿ ಅಭಿನಂದನೆ; ಬಿಎಸ್ವೈ ಬಗ್ಗೆ ಪ್ರಶಂಸೆಯ ಮಾತು
ಶಿಕ್ಷಕರು ಆಗಸ್ಟ್ 10 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ತಾಲೂಕು ಮಟ್ಟದ ಆಯ್ಕೆ ಸಮಿತಿ ಆಗಸ್ಟ್ 16 ರಿಂದ 19 ರವರೆಗೆ, ಜಿಲ್ಲಾ ಮಟ್ಟದಲ್ಲಿ ಆಗಸ್ಟ್ 20 ರಿಂದ 24 ಹಾಗೂ ರಾಜ್ಯ ಮಟ್ಟದಲ್ಲಿ ಆಗಸ್ಟ್ 25 ರಿಂದ 30 ರವರೆಗೆ ಆಯ್ಕೆ ಮಾಡಿ ಪಟ್ಟಿ ಕಳುಹಿಸಬೇಕಿದೆ. ಸರ್ಕಾರಕ್ಕೆ ಆಗಸ್ಟ್ 31 ರೊಳಗೆ ವರದಿ ನೀಡಬೇಕಿದೆ. ಸೆಪ್ಟೆಂಬರ್ 3 ರಂದು ಆಯ್ಕೆಯಾದ ಶಿಕ್ಷಕರಿಗೆ ಮಾಹಿತಿ ನೀಡಬೇಕಿದ್ದು, ಸೆ. 5 ರಂದು ಪ್ರಶಸ್ತಿ ಪ್ರದಾನವಾಗಲಿದೆ.
ನ್ಯಾಯಾಲಯದಲ್ಲಿ ಕೇಸ್ ಇರುವವರು ಅರ್ಜಿ ಸಲ್ಲಿಸುವಂತಿಲ್ಲ. ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವಂತಿಲ್ಲ. ಆಸಕ್ತ ಶಿಕ್ಷಕರು http://www.schooleducation.kar.nic.in/ – ಈ ಲಿಂಕ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಸಂಪೂರ್ಣ ವಿವರವನ್ನು ವೆಬ್ಸೈಟಿನಲ್ಲಿ ನೀಡಲಾಗಿದ್ದು, ಶಿಕ್ಷಕರು ಆ ಕೈಪಿಡಿ ಓದಿ, ಅನಂತರ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಇಲಾಖೆ ತಿಳಿಸಿದೆ. ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಆಯ್ಕೆ ಸಮಿತಿ ರಚಿಸಿ ಅದರ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.
ಒಂದು ಪ್ಲೇಟ್ಗೆ 15 ಸಾವಿರ ರೂಪಾಯಿ! ಇದು ಭೂಮಿಯ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್!
ಸಿಎಂ ಬೊಮ್ಮಾಯಿಗೆ ಶುಭಾಶಯ; ಬಿಎಸ್ವೈಗೆ, ಬಿಜೆಪಿಗೆ ಟಾಂಗ್! ಮಾರ್ಮಿಕ ಸಂದೇಶ ನೀಡಿದ ಸಿದ್ದರಾಮಯ್ಯ