ಕೊಟ್ಟೂರು: ಪ್ರಾಣಿ, ಪಕ್ಷಿಗಳಿಂದ ಬೆಳೆ ಉಳಿಸಿಕೊಳ್ಳಲು ತಾಲೂಕಿನ ಬೋರನಹಳ್ಳಿ, ಶೀರನಾಯ್ಕನಹಳ್ಳಿ ಗ್ರಾಮದ ರೈತರು ಸಣ್ಣ ಸ್ಪೀಕರ್ಗೆ ಮೊರೆ ಹೋಗಿದ್ದಾರೆ.
ಮೆಕ್ಕೆಜೋಳ ಬಿತ್ತಿದ ಕೆಲವೇ ದಿನಗಳಲ್ಲಿ ಆಹಾರ ಸಿಗದ ಹಿನ್ನೆಲೆಯಲ್ಲಿ ಕಾಡು ಹಂದಿಗಳು ಹಿಂಡು ಹಿಂಡಾಗಿ ಜಮೀನುಗಳಿಗೆ ನುಗ್ಗಿ ಬೀಜಗಳುನ್ನು ತಿಂದು ಹಾಕುತ್ತವೆ. ಗೇಣು ಉದ್ದದ ಮೆಕ್ಕೆಜೋಳದ ಪೈರನ್ನು ಹಾಳು ಮಾಡುತ್ತವೆ.
ಸೂರ್ಯಕಾಂತಿ ತೆನೆಯಲ್ಲಿ ಕಾಳುಕಟ್ಟುತ್ತಿದ್ದಂತೆ ಗಿಳಿ, ಗುಬ್ಬಿಗಳು ದಾಳಿ ಮಾಡಿ ತಿನ್ನುತ್ತವೆ. ಅಲ್ಪಮಳೆಯಲ್ಲಿ ಸಾಲಮಾಡಿ ಗೊಬ್ಬರ, ಬೀಜ ತಂದು ಬೆಳೆ ಕೈ ಸೇರುವ ಮೊದಲೇ ನಷ್ಟ ಅನುಭವಿಸಿದ ಎರಡೂ ಗ್ರಾಮದ ರೈತರು ಈ ಉಪಾಯ ಕಂಡುಕೊಂಡಿದ್ದಾರೆ.
ಪುಟ್ಟ ಸ್ಪೀಕರ್ ಬೆಲೆ 750 ರೂ.. ವಿವಿಧ ರೀತಿಯ ರಿಂಗ್ಟೌನ್, ವಿವಿಧ ಪ್ರಾಣಿಗಳ ಸೌಂಡ್ಗಳನ್ನು ಹೊಂದಿದೆ. ಇದನ್ನು ಖರೀದಿಸಿದ ರೈತರು ಎರಡು ತಾಸು ಚಾರ್ಜ್ ಮಾಡಿದರೆ ಸುಮಾರು ಐದರಿಂದ ಆರು ಗಂಟೆಗಳ ಕಾಲ ಬರಲಿದೆ. ಮೆಕ್ಕೆಜೋಳ, ಶೇಂಗಾ ಬೆಳೆ ಇದ್ದರೆ ನಾಯಿ ಬೋಗಳಿದಂತೆ, ಸೂರ್ಯಕಾಂತಿ ಬೆಳೆಗೆ ಕರ್ಕಶವಾದ ಶಬ್ದ ಸ್ಪೀಕರ್ನಿಂದ ಹೊರಹೊಮ್ಮುತ್ತದೆ.
ಹೊಲದ ನಡುವೆ ಗೂಟಕ್ಕೆ ನೇತುಹಾಕಿ ಚಾಲು ಮಾಡಿದರೆ ಒಂದು ಫರ್ಲಾಂಗ್ ದೂರದ ತನಕ ಶಬ್ದ ಕೇಳಿಸುತ್ತದೆ. ಕರ್ಕಶ ಶಬ್ದಕ್ಕೆ ಹೆದರಿ ಕಾಡು ಹಂದಿಗಳು ಓಡಿ ಹೋದರೆ, ಗಿಳಿ, ಗುಬ್ಬಿಗಳು ಹಾರಿ ಹೋಗುತ್ತವೆ. ಎರಡೂ ಗ್ರಾಮದಲ್ಲಿ 20ಕ್ಕೂ ಹೆಚ್ಚು ಇಂತಹ ಸ್ಪೀಕರ್ಗಳಿವೆ. ಇದರಿಂದ ಹೊಲಕ್ಕೆ ಹೋಗಿ ಕಾಯುವುದು ಹಾಗೂ ಬೆಳೆ ನಷ್ಟವೂ ತಪ್ಪಿದೆ.
ಪ್ರಾಣಿ-ಪಕ್ಷಿಗಳನ್ನು ಹೆದರಿಸುವ ಸ್ಪೀಕರ್ ಇಲ್ಲದಿದ್ದರೆ ಸಾಕಷ್ಟು ಬೆಳೆ ನಷ್ಟವಾಗುತ್ತಿತ್ತು. ಬೆಳೆ ಕಾಯಲು ಆಳುಗಳನ್ನು ನೇಮಿಸಿ ಕೂಲಿ ಕೊಡಬೇಕಿತ್ತು. ಅದೆಲ್ಲ ಸ್ಪೀಕರ್ನಿಂದ ಸಮಯ, ಹಣ ಮತ್ತು ಬೆಳೆ ಉಳಿತಾಯವಾಗಿದೆ.
ಅಂಬಳಿ ಪರಶಪ್ಪ
ಬೋರನಹಳ್ಳಿ ರೈತ