ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭೆಯ ಸ್ಪೀಕರ್ ಕುಲದೀಪ್ ಸಿಂಗ್ ಪಥಾನಿಯಾ ಅವರು ತಮ್ಮ ರಾಜೀನಾಮೆಯನ್ನು ಅಂಗೀಕರಿಸುವುದರಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಮೂವರು ಪಕ್ಷೇತರ ಶಾಸಕರು ಶನಿವಾರ ಇಲ್ಲಿನ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಅಶ್ಲೀಲ ವಿಡಿಯೋ ಚಿತ್ರೀಕರಣ ವೇಳೆ ದಾಳಿ: ಕೇಸ್ ಬೆನ್ನತ್ತಿದ ಪೊಲೀಸರಿಗೆ ಭಾರೀ ಶಾಕ್, ಸೆ…ಸಿಡಿಗಳು ವಶಕ್ಕೆ!
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಪರ ಮತ ಚಲಾಯಿಸಿದ್ದ ಹೋಶಿಯಾರ್ ಸಿಂಗ್, ಆಶಿಶ್ ಶರ್ಮಾ ಮತ್ತು ಕೆಎಲ್ ಠಾಕೂರ್ ಅವರು ಮಾರ್ಚ್ 22 ರಂದು ರಾಜೀನಾಮೆ ನೀಡಿ ಮಾರನೇ ದಿನ ಬಿಜೆಪಿ ಸೇರ್ಪಡೆಯಾಗಿದ್ದರು.
ನಾವು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದೇವೆ ಮತ್ತು ಅದನ್ನು ತಕ್ಷಣವೇ ಅಂಗೀಕರಿಸಬೇಕು ಎಂಬ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು.
ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವರೋ ಅಥವಾ ಒತ್ತಾಯದಿಂದ ರಾಜೀನಾಮೆ ನೀಡಿರುವರೋ ಎನ್ನುವುದರ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ವಿಧಾನಸಭೆಯಿಂದ ಶಾಸಕರಿಗೆ ನೋಟಿಸ್ ನೀಡಲಾಗಿತ್ತು.
“ನಾವು ಪಕ್ಷೇತರ ಶಾಕರು ಮತ್ತು ನಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ರಾಜೀನಾಮೆ ನೀಡಲು ನಾವು ಸ್ವತಂತ್ರರು. ನಾವು ಒತ್ತಾಯಕ್ಕೆ ಮಣಿದು ರಾಜೀನಾಮೆ ಸಲ್ಲಿಸಿದ್ದೇವೆ ಎಂದರೆ ತಪ್ಪಾಗುತ್ತದೆ. ನಾವು ಏಕೆ ರಾಜೀನಾಮೆ ನೀಡಿದ್ದೇವೆ ಎಂದು ಕೇಳುವುದರಲ್ಲಿ ಯಾವುದೇ ತರ್ಕವಿಲ್ಲ ಮತ್ತು ನಮ್ಮ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಬೇಕು ಎಂದು ಶಾಸಕ ಹೋಶಿಯಾರ್ ಸಿಂಗ್ ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.‘
ಪಕ್ಷೇತರ ಶಾಸಕರ ರಾಜೀನಾಮೆಯನ್ನು ಅಂಗೀಕರಿಸದಿರುವುದು ಅಸಂವಿಧಾನಿಕ ಮತ್ತು ಕಾನೂನುಬಾಹಿರ. ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು ಯಾವುದೇ ವ್ಯಕ್ತಿಯ ಹಕ್ಕು ಎಂದು ಹಿಮಾಚಲ ಪ್ರದೇಶದ ಬಿಜೆಪಿ ಮುಖ್ಯಸ್ಥ ರಾಜೀವ್ ಬಿಂದಾಲ್ ಅವರು ಹೇಳಿದ್ದಾರೆ.