ಹೈದರಾಬಾದ್: ಮಾಳವಿಕ ದೇವತಿ ಹೆಸರಿನ ಮಹಿಳೆಯಿಂದ ಅನಿವಾಸಿ ಭಾರತೀಯನಿಗೆ 65 ಲಕ್ಷ ರೂ. ವಂಚನೆಯಾಗಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಮಹಿಳೆಯ ಕರಾಳ ರೂಪ ತೆರೆದುಕೊಳ್ಳುತ್ತಿದೆ. ಆಂಧ್ರಪ್ರದೇಶದ ಮತ್ತೋರ್ವ ಟೆಕ್ಕಿ ಪೊಲೀಸರನ್ನು ಸಂಪರ್ಕಿಸಿದ್ದು, ಇದೇ ಮಹಿಳೆಯಿಂದ ನನಗೆ 1.2 ಕೋಟಿ ರೂ. ವಂಚನೆಯಾಗಿದೆ ಎಂದು ದೂರು ನೀಡಿದ್ದು, ಪೊಲೀಸರು ಮತ್ತಷ್ಟು ಸಂತ್ರಸ್ತರಿಗಾಗಿ ಎದುರು ನೋಡುತ್ತಿದ್ದಾರೆ.
44 ವರ್ಷ ವಯಸ್ಸಿನ ಮಾಳವಿಕ ವಿರುದ್ಧ ವಧು-ವರರ ವೇದಿಕೆ ಮ್ಯಾಟ್ರಿಮೋನಿಯಲ್ನಲ್ಲಿ ವಂಚಿಸಿದ ಹಲವು ಪ್ರಕರಣಗಳಿದ್ದು, ಆಕೆಯನ್ನು ಮೇ 27 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಕೆಯಿಂದ ಮೋಸ ಹೋದ ಮತ್ತೊಬ್ಬ ವ್ಯಕ್ತಿ ವೃತ್ತಿಯಲ್ಲಿ ಸಾಫ್ಟ್ವೇರ್ ಟೆಕ್ಕಿಯಾಗಿದ್ದು, ಆಂಧ್ರಪ್ರದೇಶದ ನಿವಾಸಿಯಾಗಿದ್ದಾನೆ. ಮಾಳವಿಕ ವಿರುದ್ಧದ ವರದಿ ನೋಡಿದ ಬಳಿಕ ಸೋಮವಾರ ಕೆಪಿಎಚ್ಬಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾನೆ.
ತನಗಾದ ವಂಚನೆ ಬಗ್ಗೆ ಮಾತನಾಡಿರುವ ಟೆಕ್ಕಿ 2017ರ ಆಗಸ್ಟ್ನಿಂದಲೂ ತೆಲುಗು ಮ್ಯಾಟ್ರಿಮೋನಿಯದಲ್ಲಿ ಯುವತಿಯ ಹೆಸರಲ್ಲಿ ಮದುವೆಯಾಗುವುದಾಗಿ ವಂಚಿಸಿದ್ದು ಸುಮಾರು 1.2 ಕೋಟಿ ರೂ. ಹಣ ಪೀಕಿದ್ದಾರೆ ಎಂದು ಆರೋಪಿಸಿದ್ದಾನೆ.
ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಅನು ಪಲ್ಲವಿ ಮಗಂತಿ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿಕೊಂಡು, ನಾನೋರ್ವ ಯುಎಸ್ಎ ಮೂಲದ ಶ್ರೀಮಂತೆ ವೈದ್ಯೆ ಎಂದು ಪರಿಚಯಿಸಿಕೊಂಡಿದ್ದಾಳೆ. ನನ್ನ ಪಾಲಕರು ಸಹ ವೈದ್ಯರು. ಆದರೆ, ನನ್ನ ತಂದೆ 2010ರಲ್ಲಿ ಮರಣ ಹೊಂದಿದರು. ನಾವು ಹೈದರಾಬಾದ್ ಮೂಲದವರಾಗಿದ್ದು, ಜುಬಿಲಿ ಹಿಲ್ಸ್ನಲ್ಲಿ ಸ್ವಂತ ನಿವಾಸ ಇದೆ ಎಂದೆಲ್ಲಾ ಕತೆ ಕಟ್ಟಿದ್ದಾಳೆ.
ಬಳಿಕ ಟೆಕ್ಕಿ, ಆಕೆಯ ಮುಂದೆ ಮದುವೆ ಪ್ರಸ್ತಾವನೆಯನ್ನು ಇಟ್ಟು ಭೇಟಿಯಾಗೋಣ ಎಂದಿದ್ದಾನೆ. ಅದಕ್ಕೆ ಇಲ್ಲ ಎಂದು ಅನು ಪಲ್ಲವಿ ಮಗಂತಿ ಹೆಸರಿನ ಮಾಳವಿಕ ನನ್ನ ಮದುವೆ ವಿಚಾರವಾಗಿ ನಮ್ಮ ಮನೆಯಲ್ಲಿ ನನ್ನ ಪ್ರಸ್ತಾವನೆಗೆ ವಿರುದ್ಧವಾಗಿದ್ದಾರೆ. ನನ್ನನ್ನು ಓರ್ವ ಶ್ರೀಮಂತ ಉದ್ಯಮಿಯ ಮಗನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂದು ನಾಟಕೀಯವಾಗಿ ತುಂಬಾ ನೋವಿನಿಂದ ಹೇಳಿಕೊಳ್ಳುತ್ತಾಳೆ. ಭಾವುಕರಾಗುವ ಟೆಕ್ಕಿ ಆಕೆ ಬಲೆಯಲ್ಲಿ ಸಿಲುಕಿಕೊಳ್ಳುತ್ತಾನೆ. ಬಳಿಕ ತನ್ನ ವರಸೆ ತೆಗೆಯುವ ಮಾಳವಿಕ ನನ್ನ ಕುಟುಂಬದ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲು ನನಗೆ ಹಣದ ಅವಶ್ಯಕತೆ ಇದೆ ಎಂದು ಹೇಳುತ್ತಾಳೆ. ನನಗೂ ಆಸ್ತಿ ಬರಬೇಕಿದೆ. ಅದು ಬಂದರೆ ಸುಖ ಜೀವನ ನಡೆಸಬಹುದೆ ಎಂದೆಲ್ಲಾ ಪೂಸಿ ಹೊಡೆಯುತ್ತಾಳೆ. ಇದನ್ನು ನಂಬಿದ ಟೆಕ್ಕಿ ಹಣ ನೀಡಲು ಒಪ್ಪಿ, ತಾನು ಕೂಡಿಟ್ಟಿದ್ದ ಹಣವನ್ನೆಲ್ಲಾ ಆಕೆಗೆ ನೀಡುತ್ತಾನೆ. ಬಳಿಕ ಮಾಳವಿಕ ಸಂಪರ್ಕ ಕಡಿದುಕೊಂಡಾಗಲೇ ತಾನು ಮೋಸ ಹೋಗಿರುವುದು ಟೆಕ್ಕಿಗೆ ತಿಳಿಯುತ್ತದೆ.
ಇದನ್ನೂ ಓದಿ: ಚಿಕಿತ್ಸೆ ನೀಡುತ್ತಾ ಕರೊನಾ ಸೋಂಕಿಗೆ ಒಳಗಾಗಿ ಚರ್ಮದ ಬಣ್ಣವೇ ಕಪ್ಪಾಗಿದ್ದ ಚೀನಾ ವೈದ್ಯ ಮೃತ
ಇದೀಗ ಕೆಪಿಎಚ್ಬಿ ಠಾಣೆಯಲ್ಲಿ ಮಾಳವಿಕ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕತೆ), 406 (ನಂಬಿಕೆಗೆ ವಂಚನೆ ಮಾಡಿದ ಅಪರಾಧ) ಮತ್ತು 66 (ಕಂಪ್ಯೂಟರ್ ಸಂಬಂಧಿತ ಪ್ರಮಾದಗಳು) ಯಡಿಯಲ್ಲಿ ಕೇಸು ದಾಖಲಾಗಿದ್ದು, ಎಫ್ಐಆರ್ ಕೂಡ ತಯಾರಾಗಿದೆ.
ಅಂದಹಾಗೆ ಮಾಳವಿಕರನ್ನು ಮೇ 27ರಂದು ಜಿಬಿಲಿ ಹಿಲ್ಸ್ ಪೊಲೀಸರು ಯುಎಸ್ ಮೂಲದ ಎನ್ಆರ್ಐ ಟೆಕ್ಕಿ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ. ಟೆಕ್ಕಿನ ಬರೋಬ್ಬರಿ 65 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಮಾಳವಿಕ ಜತೆಗೆ ಆತನ ಮಗ ವೆಂಕಟೇಶ್ವರ ಪ್ರಣವ್ ಲಲಿತ್ ಗೋಪಾಲ್ ದೇವತಿ (22)ನನ್ನು ಬಂಧಿಸಲಾಗಿದೆ. ತಾಯಿಗೆ ನಕಲಿ ಖಾತೆಗಳನ್ನು ಸೃಷ್ಟಿ ಮಾಡಿದ ಆರೋಪ ಆತನ ಮೇಲಿದೆ. ಮಾಳವಿಕ ಪತ್ನಿ ಶ್ರೀನಿವಾಸ್ ದೇವತಿ ತಪ್ಪಿಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ಮಾಳವಿಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದು ಇದೇ ಮೊದಲೇನಲ್ಲ. ನಲ್ಲಕುಂಟ ಮತ್ತು ಮರೇಡ್ಪಲ್ಲಿಯಲ್ಲೂ ಮಾಳವಿಕ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿವೆ. 2014ರಲ್ಲಿ ಗೀತಾಂಜಲಿ ಹೆಸರಿನಲ್ಲಿ ಎನ್ಆರ್ಐಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣಗಳು ಸೈಬರ್ ಕ್ರೈಂನಲ್ಲೂ ದಾಖಲಾಗಿದೆ. ಅದ್ಧೂರಿ ಜೀವನ ನಡೆಸಲು ಹಾಗೂ ಆರ್ಥಿಕ ಸಂಕಷ್ಟದಿಂದ ಅಪರಾಧ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಯುತ್ತಿದೆ. (ಏಜೆನ್ಸೀಸ್)
ಇದನ್ನೂ ಓದಿ: 12 ಲಕ್ಷ ರೂಪಾಯಿ ಬೆಲೆಯ ಸೈಕಲ್!
ಐಷಾರಾಮಿ ಜೀವನಕ್ಕಾಗಿ ತಾಯಿಯನ್ನೇ ಯುವತಿಯನ್ನಾಗಿಸಿದ ಮಗ: ಇವರ ಕತೆ ಕೇಳಿದ್ರೆ ಶಾಕ್ ಆಗ್ತೀರಾ!