ಅಮರಾವತಿ: ಆಂಧ್ರಪ್ರದೇಶದಲ್ಲಿ ವಿಧಾನಪರಿಷತ್ ಅನ್ನು ರದ್ದುಗೊಳಿಸುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಂಧ್ರಪ್ರದೇಶ ಸರ್ಕಾರ ಸೋಮವಾರ ಮನವಿ ಮಾಡಿದೆ. ಆಡಳಿತಾರೂಢ ವೈಆರ್ಎಸ್ ಕಾಂಗ್ರೆಸ್ ಪಕ್ಷದ ಸಂಸದರೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಎಪಿ ದಿಶಾ ಕ್ರಿಮಿನಲ್ ಲಾ (ಎಪಿ ಅಮೆಂಡಮೆಂಟ್) ಬಿಲ್ ಅನ್ನು ಪರಿಗಣಿಸಿ ರಾಷ್ಟ್ರಪತಿಯವರ ಅಂಕಿತ ಬೀಳುವಂತೆ ಮಾಡಿ ಅದನ್ನು ಕಾನೂನು ಮಾಡಲು ಸಹಕರಿಸಬೇಕು ಎಂದೂ ಕೇಂದ್ರವನ್ನು ಕೋರಿದ್ದಾರೆ.
ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ ರೆಡ್ಡಿ ಪಕ್ಷದ ಸಂಸದರ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದು, ಸಂಸತ್ನ ಮುಂಗಾರು ಅಧಿವೇಶನದಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸುವಂತೆ ನಿರ್ದೇಶನ ನೀಡಿದ್ದಾರೆ. ಆಂಧ್ರಪ್ರದೇಶ ವಿಧಾನ ಪರಿಷತ್ ರದ್ದುಗೊಳಿಸುವುದಕ್ಕೆ ಸಂಬಂಧಿಸಿದ ಶಾಸನಾತ್ಮಕ ನಿರ್ಣಯವನ್ನು ಆಂಧ್ರ ಸರ್ಕಾರ ಜನವರಿ 27ರಂದು ತೆಗೆದುಕೊಂಡಿದೆ. ಸಂವಿಧಾನದಲ್ಲಿರುವ ಪ್ರಕಾರ, ವಿಧಾನಪರಿಷತ್ ರದ್ದುಗೊಳಿಸುವುದಕ್ಕೆ ಕೇಂದ್ರ ಸರ್ಕಾರದ ಅನುಮತಿಯೂ ಬೇಕು.
ಇದನ್ನೂ ಓದಿ: ದೇವರಮನೆ ಗುಡ್ಡದಲ್ಲೀಗ ಕುರಂಜಿ ಹೂವಿನ ಘಮ
58 ಸದಸ್ಯ ಬಲದ ವಿಧಾನಪರಿಷತ್ನಲ್ಲಿ ತೆಲುಗುದೇಶಂ ಪಾರ್ಟಿಗೆ ಹೆಚ್ಚು ಸದಸ್ಯಬಲವಿದ್ದು, ವೈಎಸ್ಆರ್ಸಿಗೆ ಯಾವುದೇ ಬಿಲ್ಗಳನ್ನು ಪಾಸ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಆದಷ್ಟು ಶೀಘ್ರವಾಗಿ ವಿಧಾನಪರಿಷತ್ ರದ್ದುಗೊಳಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. (ಏಜೆನ್ಸೀಸ್)
ಪ್ರಧಾನಿಯಿಂದ ಸಿಜೆಐವರೆಗೆ ವ್ಯಾಪಿಸಿದೆ ಚೀನಿ ಬೇಹು; ಸಿದ್ದರಾಮಯ್ಯ ಮೇಲೂ ಕಣ್ಗಾವಲು