More

    ಬರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 79,839 ರೈತರ ಖಾತೆಗೆ ಹಣ ಜಮೆ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

    ಮಂಡ್ಯ: ಜಿಲ್ಲೆಯಲ್ಲಿ ಬರದ ಹಿನ್ನಲೆ ಬೆಳೆಹಾನಿಗೆ ಸಂಬಂಧಿಸಿದಂತೆ 34,94,97,157 ರೂಗಳನ್ನು ಪರಿಹಾರವಾಗಿ 79,839 ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
    ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರದ ಹಿನ್ನಲೆ ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರದ ಹಣವನ್ನು ಜಮೆ ಮಾಡಲಾಗಿದೆ. ಆದಾಗ್ಯೂ ಬಹಳಷ್ಟು ರೈತರು ತಮಗೆ ಹಣ ಬಂದಿಲ್ಲವೆಂದು ಮೌಖಿಕವಾಗಿ ಕರೆ ಮಾಡಿ ದೂರು ಸಲ್ಲಿಸುತ್ತಿದ್ದು, ತಾಲೂಕು ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಿ ರೈತರ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು.
    ಜಿಲ್ಲೆಯಲ್ಲಿ ಮಳೆಯ ಕೊರತೆ ಹಿನ್ನಲೆ ಬೆಳೆ ನಷ್ಟ ಕುರಿತಂತೆ ಸಮೀಕ್ಷೆ ನಡೆಸಲಾಗಿದೆ. ಅದರಂತೆ ಸುಮಾರು 79,839 ರೈತರಿಗೆ ಸೇರಿದ 39,812 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿರುವುದಾಗಿ ವರದಿ ಸಲ್ಲಿಸಲಾಗಿತ್ತು. ಅದರಂತೆ ಎಸ್‌ಡಿಆರ್‌ಎಫ್ ನಿಯಮದ ಅನುಸಾರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿರುತ್ತದೆ. ರೈತರ ಖಾತೆಗೆ ಜಮೆ ಮಾಡಿರುವ ಪರಿಹಾರ ಹಾಗೂ ಫಲಾನುಭವಿಗಳ ವಿವರವನ್ನು ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ತಹಸೀಲ್ದಾರ್ ಕಚೇರಿಯಲ್ಲಿ ಪ್ರಕಟಿಸಬೇಕು. ಮಾತ್ರವಲ್ಲದೆ ರೈತರ ಖಾತೆಗೆ ಜಮೆ ಮಾಡಿರುವ ವಿವರವನ್ನು ಗ್ರಾಮ ಪಂಚಾಯಿತಿ ವೆಬ್‌ಸೈಟ್‌ನಲ್ಲಿಯೂ ಹಾಕಬೇಕು ಎಂದರು.
    ರೈತರ ಜಮೀನಿನ ಸರ್ವೇ ಸಂಖ್ಯೆ, ರೈತರ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಇನ್ನಿತರೆ ವಿವರಗಳು ಹೆಲ್ಪ್‌ಡೆಸ್ಕ್‌ನಲ್ಲಿ ಲಭ್ಯವಿರಬೇಕು. ರೈತರು ಸಂಪರ್ಕಿಸಿದ ತಕ್ಷಣ ಅವರಿಗೆ ಮಂಜೂರಾಗಿರುವ ಪರಿಹಾರದ ವಿವರ, ಮಂಜೂರಾಗಿಲ್ಲದಿದ್ದಾರೆ ನಿಖರ ಮಾಹಿತಿ ನೀಡಬೇಕು. ಒಂದು ವೇಳೆ ಪರಿಹಾರ ಬಂದಿಲ್ಲ ಎಂದ ಕೂಡಲೇ ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಿ ಎಂದು ಅವರನ್ನು ಅಲೆದಾಡುವಂತೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
    ಪರಿಹಾರ ಹಣ ಪಾವತಿಗೆ ಸಂಬಂಧಿಸಿದಂತೆ ಸುಮಾರು 1000 ರೈತರಿಗೆ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆಯಾಗದೆ, ಖಾತೆ ನಿಷ್ಕ್ರಿಯೆ ಹಾಗೂ ಸರಿಯಾದ ಐ.ಎಫ್.ಎಸ್.ಸಿ ಕೋಡ್ ಇಲ್ಲ ಎಂದು ಪಾವತಿಯಾಗಿರುವುದಿಲ್ಲ. ಇವುಗಳನ್ನು ತಹಸೀಲ್ದಾರ್ ವಿಶೇಷ ಕಾಳಜಿ ವಹಿಸಿ 24 ಗಂಟೆಯೊಳಗೆ ಪರಿಹಾರ ಹಣ ಪಾವತಿಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಇನ್ನು ಪ್ರಸ್ತುತ ಸಮಸ್ಯಾತ್ಮಕ ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದರೆ, ಕಡ್ಡಾಯವಾಗಿ ಟ್ಯಾಂಕರ್ ಮ್ಯಾನೆಜ್‌ಮೆಂಟ್ ಆ್ಯಪ್ ಮೂಲಕ ನಿರ್ವಹಿಸಬೇಕು. ಇಲ್ಲವಾದಲ್ಲಿ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
    ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಕೆ.ಆರ್.ಪೇಟೆ ತಾಲೂಕಿನಲ್ಲಿ 17,298 ರೈತರಿಗೆ ಸೇರಿದ 9,322 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 7,70,60,982 ರೂ ಪರಿಹಾರ ಪಾವತಿಸಲಾಗಿದೆ. ಮದ್ದೂರಿನಲ್ಲಿ 12,499 ರೈತರ 3,050 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ 3,62,56,911 ರೂ, ಮಳವಳ್ಳಿಯಲ್ಲಿ 11,599 ರೈತರ ಒಟ್ಟು 4,240 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ 4,63,86,485 ರೂ, ಮಂಡ್ಯದಲ್ಲಿ 4,408 ರೈತರ ಒಟ್ಟು 2,078 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ 1,74,35,984 ರೂ, ನಾಗಮಂಗಲದಲ್ಲಿ 28,926 ರೈತರ ಒಟ್ಟು 18,646 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ 15,15,74,633 ರೂ, ಪಾಂಡವಪುರದಲ್ಲಿ 4,700 ರೈತರ ಒಟ್ಟು 2,323 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ 1,94,82,867 ರೂ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ 409 ರೈತರ ಒಟ್ಟು 150 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 12,99,295 ರೂ ಪರಿಹಾರದ ಹಣ ಪಾವತಿಸಲಾಗಿದೆ ಎಂದು ವಿವರಿಸಿದರು.
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಮಹೇಶ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಸುರೇಶ್‌ಕುಮಾರ್, ಜಂಟಿ ಕೃಷಿ ನಿರ್ದೆಶಕ ಡಾ.ವಿ.ಎಸ್.ಅಶೋಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರ ಮಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts