ಮುಂಬೈ: ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪುತ್ರ ಅನಂತ್ ಅಂಬಾನಿ ಅವರ ನಿಶ್ಚಿತಾರ್ಥ ರಾಧಿಕಾ ಮರ್ಚೆಂಟ್ ಜೊತೆ ಇಂದು ಅದ್ಧೂರಿಯಾಗಿ ಕುಟುಂಬದ ಸಮ್ಮುಖದಲ್ಲಿ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.
ಅನೇಕ ವರ್ಷಗಳಿಂದ ಅನಂತ್ ಮತ್ತು ರಾಧಿಕ ನಡುವೆ ಪರಿಚಯವಿದೆ. ಕಳೆದ ಡಿಸೆಂಬರ್ 29ರಂದು ರಾಜಸ್ಥಾನದ ನಾಥದ್ವಾರದಲ್ಲಿ ರೊಕಾ ಸಮಾರಂಭ (ಇದು ವಿವಾಹದ ಮೊದಲ ಹೆಜ್ಜೆಯನ್ನು ಸೂಚಿಸುವ ಮೊದಲ ಕಾರ್ಯಕ್ರಮವಾಗಿದ್ದು, ವಧು-ವರರ ಕುಟುಂಬವು ಒಗ್ಗೂಡಿ, ದಂಪತಿಯನ್ನು ಆಶೀರ್ವದಿಸಿ ಮದುವೆಯನ್ನು ಒಪ್ಪಿಕೊಳ್ಳುವುದು) ನಡೆದಿತ್ತು.
ಇಂದು ಸಂಜೆ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಗೋಲ್ ಧನ ಮತ್ತು ಚುನಾರಿ ವಿಧಿ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದವು. ಅಂಬಾನಿ ಪುತ್ರಿ ನೀತಾ ಅಂಬಾನಿ ನೇತೃತ್ವದಲ್ಲಿ ನಡೆದ ನೃತ್ಯ ಪ್ರದರ್ಶನವು ಅತಿಥಿಗೆ ಸರ್ಪ್ರೈಸ್ ನೀಡಿತು.
ಇಂದು ಬೆಳಗ್ಗೆ ಕುಟುಂಬದ ಇತರೆ ಸದಸ್ಯರೊಂದಿಗೆ ರಾಧಿಕಾ ಮರ್ಚೆಂಟ್ ಅವರ ಮನೆಗೆ ಹೋದ ಇಶಾ ಅಂಬಾನಿ ಎಲ್ಲರನ್ನು ಇಂದು ಸಂಜೆ ನಡೆದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಸಂಜೆಯ ಪೂಜೆ ಮತ್ತು ಆರತಿಯ ಸಮಯದಲ್ಲಿ ಅಂಬಾನಿ ಕುಟುಂಬ ಮರ್ಚೆಂಟ್ ಕುಟುಂಬವನ್ನು ಆತ್ಮೀಯವಾಗಿ ಬರಮಾಡಿಕೊಂಡಿತು.
ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಕುಟುಂಬದವರು ಅನಂತ್ ಮತ್ತು ರಾಧಿಕಾ ಅವರನ್ನು ದೇವಸ್ಥಾನಕ್ಕೆ ಕರೆದೊಯ್ದರು. ನಿಶ್ಚಿತಾರ್ಥ ಸಮಾರಂಭದ ಸ್ಥಳದಲ್ಲಿ ಸಾಂಪ್ರದಾಯಿಕ ಲಗಾನ್ ಪತ್ರಿಕಾ ಅಥವಾ ಮದುವೆಯ ಆಮಂತ್ರಣವನ್ನು ಓದಿದ ಬಳಿಕ ಗಣೇಶ ಪೂಜೆಯೊಂದಿಗೆ ನಿಶ್ಚಿತಾರ್ಥದ ಕಾರ್ಯಗಳು ಪ್ರಾರಂಭವಾದವು.
ಇದೇ ಸಮಾರಂಭದಲ್ಲಿ ಇತ್ತೀಚೆಗಷ್ಟೇ ಅವಳಿ ಮಕ್ಕಳಿಗೆ ಇಶಾ ಅಂಬಾನಿ ಜನ್ಮ ನೀಡಿದ್ದನ್ನು ಘೋಷಣೆ ಮಾಡಲಾಯಿತು. ಬಳಿಕ ಅನಂತ್ ಮತ್ತು ರಾಧಿಕಾ ಉಂಗುರವನ್ನು ಬದಲಾಯಿಸಿಕೊಂಡರು.
ಅಂದಹಾಗೆ ಅನಂತ್, ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ. ಅನಂತ್ ಅವರು ಅಮೆರಿಕದ ಬ್ರೌನ್ ಯೂನಿವರ್ಸಿಟಿಯ ಪದವೀಧರ. ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಜಿಯೋ ಪ್ಲಾಟ್ಫಾರ್ಮ್ಗಳು ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್ನ ಮಂಡಳಿಗಳಲ್ಲಿ ಸದಸ್ಯರಾಗಿ ಸೇರಿದಂತೆ ವಿವಿಧ ಸಾಮರ್ಥ್ಯಗಳಲ್ಲಿ ಸೇವೆ ಅನಂತ್ ಸಲ್ಲಿಸಿದ್ದಾರೆ. ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ನ ಎನರ್ಜಿ ಬಿಸಿನೆಸ್ ಅನ್ನು ಮುನ್ನೆಡೆಸುತ್ತಿದ್ದಾರೆ.
ರಾಧಿಕಾ ಮರ್ಚೆಂಟ್ ಅವರು ಶೈಲಾ ಮತ್ತು ವೀರೆನ್ ಮರ್ಚೆಂಟ್ ಅವರ ಪುತ್ರಿ. ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ಪದವಿಯನ್ನು ಪಡೆದಿರುವ ರಾಧಿಕಾ, ಎನ್ಕೋರ್ ಹೆಲ್ತ್ಕೇರ್ ಮಂಡಳಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)
ಕರ್ನಾಟಕ ಬಳಿಕ ಉತ್ತರ ಪ್ರದೇಶದಲ್ಲಿ ಹಿಜಾಬ್ ವಿವಾದ! ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ನೋ ಎಂಟ್ರಿ
ಬಾಳಿ ಬದುಕಬೇಕಿದ್ದ ತುಮಕೂರಿನ ಮೂವರು ಸಹೋದರಿಯರು ಒಂಟಿ ಮನೆಯಲ್ಲಿ ದುರಂತ ಅಂತ್ಯ! ಇವರ ಕಣ್ಣೀರ ಕಥೆ ಹೇಳತೀರದು…
ನ್ಯೂಜಿಲೆಂಡ್ ಪ್ರಧಾನಿ ಸ್ಥಾನಕ್ಕೆ ಜಸಿಂಡಾ ಅಡೆರ್ನ್ ರಾಜೀನಾಮೆ: ಕೊಟ್ಟ ಕಾರಣ ಹೀಗಿದೆ…