ರಾಜಸ್ಥಾನ: ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಕರಣದ ಸುಳಿಯಲ್ಲಿ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸಿಲುಕಿಕೊಂಡಿದ್ದು, ಜಾರಿ ನಿರ್ದೇಶನಾಲಯದ ದಾಳಿಯಲ್ಲಿ ಸಿಕ್ಕಿಬಿದ್ದ ಆರೋಪಿ ನೀಡಿದ್ದ ಹೇಳಿಕೆ ಅವರಿಗೆ ಉರುಳಾಗಿ ಪರಿಣಮಿಸಿದೆ.
ಅದಾದ ಬಳಿಕ ಈ ಪ್ರಕರಣದಲ್ಲಿ ನಾನಾ ಬೆಳವಣಿಗೆಗಳು ಆಗುತ್ತಿದ್ದು, ಇಂದು ಮಹದೇವ ಬೆಟ್ಟಿಂಗ್ ಆ್ಯಪ್ ಸೇರಿದಂತೆ 22 ಆ್ಯಪ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಆ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಘೇಲ ಪ್ರತಿಕ್ರಿಯೆ ನೀಡಿದ್ದು, ಇದೀಗ ಅವರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸಂಪುಟ ಸಹೋದ್ಯೋಗಿ ಸ್ಮೃತಿ ಇರಾನಿ ನಿನ್ನೆ ವಿವರವಾದ ಹೇಳಿಕೆ ನೀಡಿದ್ದಾರೆ ಎಂದಿರುವ ಜೋಶಿ, ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ವಿಧಾನಸಭಾ ಚುನಾವಣೆ: ಪ್ರಲ್ಹಾದ ಜೋಶಿ ದೆಹಲಿ ನಿವಾಸ ಈಗ ಬಿಜೆಪಿ ಚಟುವಟಿಕೆಯ ಕೇಂದ್ರ
ಜಾರಿ ನಿರ್ದೇಶನಾಲಯದ ದಾಳಿಯಲ್ಲಿ ಹಣ ಸಹಿತ ಸಿಕ್ಕಿಬಿದ್ದಿರುವ ಆರೋಪಿ, ಛತ್ತೀಸ್ಗಢ ಮುಖ್ಯಮಂತ್ರಿಗೆ 5 ಕೋಟಿ ರೂ. ಕೊಟ್ಟಿದ್ದಾಗಿ ಹೇಳಿಕೆ ನೀಡಿದ್ದಾನೆ. ಆ್ಯಪ್ ಪ್ರಮೋಟರ್ಸ್ ಸಿಎಂಗೆ ಮೊದಲಿಗೆ 5 ಕೋಟಿ ರೂ. ಕೊಟ್ಟಿದ್ದಾರೆ ಎಂದು ಆತ ಹೇಳಿದ್ದು, ಸಿಎಂ ವಿರುದ್ಧ 500 ಕೋಟಿ ರೂ. ಆರೋಪವಿದೆ ಎಂದು ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: 34 ವರ್ಷದ ಡಾಕ್ಟರ್ ಕುಸಿದು ಬಿದ್ದು ಸಾವು; ಆಸ್ಪತ್ರೆಯಲ್ಲಿ ರೋಗಿಗಳನ್ನು ಪರೀಕ್ಷಿಸಿ ಮೆಟ್ಟಿಲೇರುತ್ತಿದ್ದಂತೆ ಹೃದಯಾಘಾತ!
ಈ ಪ್ರಕರಣದಲ್ಲಿ ಅಲ್ಲಿ ತನಿಖೆ ನಡೆಯಲಿದೆಯೋ ಇಲ್ಲವೋ ಎಂಬುದನ್ನು ನಾನು ಕೇಳಬಯಸುತ್ತೇನೆ ಎಂದಿರುವ ಜೋಶಿ, ಜಾರಿ ನಿರ್ದೇಶನಾಲಯದ ಹೇಳಿಕೆ ಏನು? ಕಾಂಗ್ರೆಸ್ನವರು ಚುನಾವಣಾ ಆಯೋಗದ ಮುಂದೆ ಯಾವ ಬೇಡಿಕೆ ಇಡಲು ಹೋಗಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಭ್ರಷ್ಟಾಚಾರ-ಹಗರಣ ಏನೇ ಇರಲಿ, ನಾವು ತನಿಖೆಗೆ ಆಗ್ರಹಿಸುವುದು ತಪ್ಪೇ ಎಂದೂ ಪ್ರಶ್ನಿಸಿದ್ದಾರೆ.
ಅವರು ಚುನಾವಣಾ ಆಯೋಗದ ಮುಂದೆ ಏನನ್ನು ಪ್ರಸ್ತಾಪಿಸಲು ಹೋಗುತ್ತಿದ್ದಾರೋ ಗೊತ್ತಿಲ್ಲ. ಜನಸಾಮಾನ್ಯರಿಗೂ ಈ ವಿಷಯ ಅರ್ಥವಾಗುತ್ತಿಲ್ಲ. ಆರೋಪಿಯೇ ಸಿಎಂಗೆ ಹಣ ತಲುಪಿಸಿದ್ದೇನೆ ಎಂದು ಹೇಳಿರುವಾಗ ತನಿಖೆ ಆಗಬೇಕೋ ಬೇಡವೋ ಎಂದು ನಾನು ಭೂಪೇಶ್ ಬಘೇಲ್ ಅವರನ್ನು ಕೇಳುತ್ತಿದ್ದೇನೆ ಎಂದು ಜೋಶಿ ಹೇಳಿದ್ದಾರೆ.
ನಿಮ್ಮಂಥ ನಾಯಕರಿರುವ ದೇಶದಲ್ಲಿ ನಾನು ಸುರಕ್ಷಿತ: ನಟಿ ರಶ್ಮಿಕಾ ಮಂದಣ್ಣ