ಸಿರಿಗೆರೆ: ತರಳಬಾಳು ಮಠದ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವಚನ ತತ್ವ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗವಹಿಸಲು 15 ದಿನಗಳ ಕಾಲ ಉತ್ತರ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಲಿದ್ದಾರೆ.
ಬೃಹನ್ಮಠದ ಐಕ್ಯಮಂಟಪದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳ ಗದ್ದುಗೆಗೆ ಶನಿವಾರ ಪುಷ್ಪ ನಮನ ಸಲ್ಲಿಸಿ, ಸಿರಿಗೆರೆಯಿಂದ ಪ್ರಯಾಣ ಬೆಳೆಸಿದರು.
ಸ್ಯಾನ್ ಫ್ರಾನ್ಸಿಸ್ಕೋದಿಂದ ಹವಾಯಿ ದ್ವೀಪ, ಚಿಕಾಗೋ, ಬಹಾಮ ದ್ವೀಪ, ಜರ್ಮನಿ, ಆಸ್ಟ್ರಿಯಾ, ಸ್ವಿಟ್ಜರ್ಲ್ಯಾಂಡ್, ಐರ್ಲೆಂಡ್, ದುಬೈ ಮುಂತಾದ ದೇಶಗಳಿಗೆ ತೆರಳಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬಸವಾದಿ ಶಿವಶರಣರ ವಚನ ಸಂಪುಟ ತಂತ್ರಾಂಶ ಕುರಿತು ಅಲ್ಲಿನ ಭಾರತೀಯರಿಗೆ ಮಾಹಿತಿ ನೀಡಲಿದ್ದಾರೆ ಎಂದು ಮಠದ ಕಾರ್ಯದರ್ಶಿ ತಿಳಿಸಿದ್ದಾರೆ.
ಸ್ವಾಮೀಜಿ ಅವರನ್ನು ವಿದೇಶಕ್ಕೆ ಬೀಳ್ಕೊಡುವ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್.ಬಿ.ರಂಗನಾಥ್,
ಆಡಳಿತಾಧಿಕಾರಿ ಡಾ.ಎಚ್.ವಿ.ವಾಮದೇವಪ್ಪ, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಹಾಗೂ ಸಿರಿಗೆರೆ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.