ಅಳ್ನಾವರ: ಪಟ್ಟಣದಲ್ಲಿ ಹಿಂದುಪರ ಸಂಘಟನೆಗಳಿಂದ ನಡೆಯುವ 6ನೇ ವರ್ಷದ ದುರ್ಗಾಮಾತಾ ದೌಡ್ ಅನ್ನು ಗ್ರಾಮದೇವಿ ಶ್ರೀ ಲಕ್ಷ್ಮೀ ಹಾಗೂ ದುರ್ಗಾ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಭಾನುವಾರ ಚಾಲನೆ ನೀಡಲಾಯಿತು.
ನಿತ್ಯ ಒಂದು ದೇವಸ್ಥಾನದಿಂದ ಮತ್ತೊಂದು ದೇವಸ್ಥಾನದವರೆಗೆ ಹಾಡು, ಘೋಷಣೆಗಳೊಂದಿಗೆ ಸಂಚರಿಸಿ ಕೊನೆಯ ದಿನ ಕಕ್ಕೇರಿಯ ಬಿಷ್ಟಮ್ಮದೇವಿ ದೇವಸ್ಥಾನದಲ್ಲಿ ದೌಡ್ ಮುಕ್ತಾಯಗೊಳ್ಳುವದು. ಶಿವಾಜಿ ರಸ್ತೆ, ಮೇದಾರ ಓಣಿ, ನೆಹರು ನಗರದ ಕಾಳೆ ಪ್ಲಾಟ್, ಇಂದಿರಾ ನಗರದ ಎರಡು ಕಡೆಗಳಲ್ಲಿ ಸೇರಿ ಪಟ್ಟಣದಲ್ಲಿ ಪ್ರತಿಷ್ಠಾಪಿಸುವ ಒಟ್ಟು 5 ಶ್ರೀ ದುರ್ಗಾ ಮೂರ್ತಿಗಳನ್ನು ಮಧ್ಯಾಹ್ನ ಮೆರವಣಿಗೆ ಮೂಲಕ ತರಲಾಯಿತು. ನಿತ್ಯ ಬೆಳಗ್ಗೆ, ಸಂಜೆ ಮಹಾಮಂಗಳಾರತಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಎಲ್ಲ ದೇವಸ್ಥಾನಗಳಲ್ಲಿ ಸಂಜೆ ಘಟಸ್ಥಾಪನೆ ನಡೆಯಿತು.