ಮುಂಬೈ: ಅಲ್ಲಿಯವರೆಗೂ ಟಾಲಿವುಡ್ನಲ್ಲಿ ಮಾತ್ರ ದೊಡ್ಡ ಸ್ಟಾರ್ ಆಗಿದ್ದ ಅಲ್ಲು ಅರ್ಜುನ್, ‘ಪುಷ್ಪ 1’ ಚಿತ್ರದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ‘ಪುಷ್ಪ 1’ ನಂತರ ಅಲ್ಲು ಅರ್ಜುನ್ಗೆ ಬಾಲಿವುಡ್ನಲ್ಲೂ ಆಫರ್ಗಳು ಹೆಚ್ಚಿದ್ದು, ಮೂಲಗಳ ಪ್ರಕಾರ, ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವುದಕ್ಕೆ ಒಂದು ಆಫರ್ ಸಿಕ್ಕಿದೆಯಂತೆ.
ಇದನ್ನೂ ಓದಿ: ದೈವ ಹಾಗೂ ದುಷ್ಟ ಶಕ್ತಿ ನಡುವಿನ ಸಂಘರ್ಷದ ಕಥೆಯೇ ‘ಆರ’
ಹಾಗಂತ ಈ ವಿಷಯವನ್ನು ಅಲ್ಲು ಅರ್ಜುನ್ ಆಗಲೀ, ‘ಜವಾನ್’ ಚಿತ್ರದ ನಿರ್ದೇಶಕ ಅಟ್ಲಿ ಆಗಲೀ ಎಲ್ಲೂ ಬಹಿರಂಗಪಡಿಸಿಲ್ಲ. ಚಿತ್ರದಲ್ಲೊಂದು ಪ್ರಮುಖ ಬಟ್ ಅತಿಥಿ ಪಾತ್ರವಿದೆಯಂತೆ. ಆ ಪಾತ್ರವನ್ನು ಅಲ್ಲು ಅರ್ಜುನ್ ಮಾಡಿದರೆ ಚೆನ್ನ ಎಂದನಿಸಿ ಅಟ್ಲಿ ಅವರಿಗೊಂದು ಆಫರ್ ಕೊಟ್ಟಿದ್ದಾರಂತೆ. ಈ ಆಫರ್ ಏನಾದರೂ ಅಲ್ಲು ಅರ್ಜುನ್ ಒಪ್ಪಿ ಚಿತ್ರದಲ್ಲಿ ನಟಿಸಿದರೆ, ಅದು ಅವರ ಮೊದಲ ಬಾಲಿವುಡ್ ಚಿತ್ರವಾಗುತ್ತದೆ.
ಅಲ್ಲು ಅರ್ಜುನ್ ಇದುವರೆಗೂ ತೆಲುಗಿನಲ್ಲೇ ಚಿತ್ರಗಳನ್ನು ಮಾಡಿಕೊಂಡು ಬಂದವರು. ಬೇರೆ ಭಾಷೆಗಳಲ್ಲಿ ಆಗಾಗ ಅವಕಾಶಗಳು ಸಿಕ್ಕರೂ, ಅರ್ಜುನ್ ಮಾತ್ರ ಯಾವುದೇ ಭಾಷೆಗೂ ಹೋಗಿಲ್ಲ. ಹಾಗಾಗಿ, ಈಗ ‘ಜವಾನ್’ ಚಿತ್ರದ ಮೂಲಕವಾದರೂ ಅಲ್ಲು ಅರ್ಜುನ್, ಬಾಲಿವುಡ್ಗೆ ಎಂಟ್ರಿ ಕೊಡುತ್ತಾರಾ ಎಂಬ ಕುತೂಹಲ ಎಲ್ಲರಿಗೂ ಇದೆ.
ಇದನ್ನೂ ಓದಿ: ‘ಮೇರಿ’ ಟ್ರೇಲರ್ ಬಿಡುಗಡೆ … ಫೆಬ್ರವರಿ 24ಕ್ಕೆ ಚಿತ್ರ ತೆರೆಗೆ
‘ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್ಗೆ ನಯನತಾರಾ ನಾಯಕಿಯಾಗಿ ನಟಿಸಿದ್ದು, ಅವರೊಂದಿಗೆ ವಿಜಯ್ ಸೇತುಪತಿ, ಸಾನ್ಯ ಮಲ್ಹೋತ್ರಾ, ಪ್ರಿಯಾಮಣಿ ಮುಂತಾದವರು ಅಭಿನಯಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.
ಪ್ರೇಮಿಗಳನ್ನು ನೋಡಿದ್ರೆ ರಾಖಿ ಸಾವಂತ್ಗೆ ಅಳು ಬರುತ್ತದಂತೆ … ಯಾಕೆ ಗೊತ್ತಾ?