ಕೊಲ್ಕತಾ: ಚುನಾವಣೆಯ ಬಿಸಿ ಏರುತ್ತಿರುವ ಪಶ್ಚಿಮ ಬಂಗಾಳದಲ್ಲಿ, ಬಿಜೆಪಿಯನ್ನು ಬೆಂಬಲಿಸುತ್ತಿರುವ ಕಾರಣಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ ಇಬ್ಬರು ಸದಸ್ಯರ ಮೇಲೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ರೌಡಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿರುವ ಹಲ್ಲೆಯಲ್ಲಿ ದುಷ್ಕರ್ಮಿಗಳು ರಿವಾಲ್ವರ್ ಮತ್ತು ಚಾಕುಗಳಿಂದ ಆಕ್ರಮಣ ನಡೆಸಿದರು ಎನ್ನಲಾಗಿದೆ.
24 ಪರಗಣ ಜಿಲ್ಲೆಯ ರಹಾರಾ ಬಜಾರ್ನಲ್ಲಿ ನಿನ್ನೆ(ಮಾರ್ಚ್ 9) ಮಧ್ಯಾಹ್ನ ಎಬಿವಿಪಿ ಕಾರ್ಯಕರ್ತರಾದ ಸೌತನಿಕ್ ಬ್ಯಾನರ್ಜಿ ಮತ್ತು ಕೃಷ್ಣೇಂದು ಚಕ್ರಬೊರ್ತಿ ಎಂಬುವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಯುವಕರು, ತಾವು ಎಬಿವಿಪಿ ಸದಸ್ಯರಾಗಿರುವ ಕಾರಣ ಟಿಎಂಸಿಗೆ ಸೇರಿದ ರೌಡಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಎಂದು ಆರೋಪಿಸಿದ್ದಾರೆ.
ಒಂಭತ್ತರಿಂದ ಹತ್ತು ಜನ ದುಷ್ಕರ್ಮಿಗಳ ಗುಂಪು ಮೇಲೆರಗಿ ಥಳಿಸಿದ್ದು, ರಿವಾಲ್ವರ್ ಹಿಂಭಾಗದಿಂದ ಹೊಡೆದು ಮತ್ತು ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ್ದಾರೆ. ಹಲ್ಲೆಯ ವೇಳೆ ಹಲ್ಲೆಕೋರರು, ‘ಬಿಜೆಪಿಯನ್ನು ಏಕೆ ಬೆಂಬಲಿಸುತ್ತಿದ್ದೀರಿ. ಟಿಎಂಸಿಯ ವಿದ್ಯಾರ್ಥಿ ವಿಭಾಗವಾದ ಟಿಎಂಸಿ ಛಾತ್ರ ಪರಿಷದ್ನೊಂದಿಗೆ ಏಕೆ ಕೆಲಸ ಮಾಡುತ್ತಿಲ್ಲ’ ಎಂದು ಕೇಳಿದರು. ಬಿಜೆಪಿ ಕಾರ್ಯಕರ್ತರು ರಕ್ಷಣೆಗೆ ಬಂದ ಮೇಲೆ ಜಾಗ ಖಾಲಿ ಮಾಡಿದರು ಎಂದು ವೈರಲ್ ಆಗಿರುವ ವೀಡಿಯೋದಲ್ಲಿ ಹೇಳಲಾಗಿದೆ. ಈ ಬಗ್ಗೆ ರಾಹ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಆರೋಪಗಳನ್ನು ತಳ್ಳಿಹಾಕಿರುವ ಟಿಎಂಸಿ, ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿ ಸುಳ್ಳು ಕಥೆಗಳನ್ನು ಹೆಣೆಯುತ್ತಿದೆ ಎಂದಿದೆ. ಖರ್ದಾ ಪಟ್ಟಣ ಟಿಎಂಸಿ ಅಧ್ಯಕ್ಷ ದಿಬ್ಯೇಂದು ಚೌಧರಿ, “ಇದು ಪೂರ್ವನಿಯೋಜಿತವಾಗಿ ಬಿಜೆಪಿ ಸೃಷ್ಟಿಸಿರುವ ಘಟನೆ. ಇಲ್ಲಿ ಅವರಿಗೆ ಸೋಲು ಖಚಿತವೆಂದು ಗೊತ್ತಾಗಿರುವುದರಿಂದ ಆಂತರಿಕ ಜಗಳಗಳು ಆರಂಭವಾಗಿವೆ. ಆದರೆ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಟಿಎಂಸಿಗೂ ಈ ಘಟನೆಗೂ ಸಂಬಂಧವಿಲ್ಲ” ಎಂದಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಕೆಂಪು ಕೋಟೆ ಹಿಂಸಾಚಾರ : ಪರಾರಿ ಆಗುತ್ತಿದ್ದ ಡಚ್ ಪ್ರಜೆ ಪೊಲೀಸರ ವಶಕ್ಕೆ
“ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ