ಬೆಂಗಳೂರು: ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತಿದೆ. ಪ್ರಾಣ ಉಳಿಸಿದ ವೈದ್ಯ ದೇವರಿಗೆ ಸಮಾನ ಎನ್ನುವುದು ಇದರ ಅರ್ಥ. ಆದರೆ ಈ ಇಬ್ಬರಿಗೆ ಮದ್ಯದ ಅಮಲಿನಲ್ಲಿ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.
ಇವರು ಬಿಲ್ನಲ್ಲಿ ಡಿಸ್ಕೌಂಟ್ ಕೊಡದಿದ್ದಕ್ಕೆ ಡಾಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇವರಿಬ್ಬರೂ ಕುಡಿದು ಜಗಳವಾಡಿ ಆಸ್ಪತ್ರೆಗೆ ಬಂದಿದ್ದು ಅಲ್ಲೂ ಗಲಾಟೆ ಮಾಡಿದ್ದಾರೆ.
ಈ ಘಟನೆ ಮಾರತ್ತಹಳ್ಳಿಯ ಪಣತ್ತೂರಿನಲ್ಲಿ ನಡೆದಿದೆ. ಪಣತ್ತೂರಿನಲ್ಲಿ ಡಾ ಬಸವರಾಜು ಎನ್ನುವ ವೈದ್ಯ ಖಾಸಗಿ ಅಸ್ಪತ್ರೆ ನಡೆಸುತ್ತಿದ್ದಾರೆ. ಈ ಆಸ್ಪತ್ರೆಗೆ ಹರೀಶ್ ಹಾಗೂ ರಾಜೇಶ್ ಎನ್ನುವವರು ಕುಡಿದು ಗಲಾಟೆ ಮಾಡಕೊಂಡು ಬಂದಿದ್ದರು. ಹರೀಶ್, ಬಿಯರ್ ಬಾಟಲ್ನಿಂದ ಕೈಗೆ ಹೊಡೆದುಕೊಂಡು ಗಾಯ ಮಾಡಿಕೊಂಡಿದ್ದ.
ಖಾಸಗಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಪಡೆದ ಬಳಿಕ ಸಿಬ್ಬಂದಿ, 1,300 ರೂ.ಯ ಬಿಲ್ ನೀಡಿದ್ದರು. ಈ ವೇಳೆ ಬಿಲ್ ನೋಡಿ ಹರೀಶ್ ಹಾಗೂ ರಾಜೇಶ್, ಬಿಲ್ ಮೊತ್ತ ಜಾಸ್ತಿಯಾಗಿದೆ ಎಂದು ಅಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ. ನಂತರ ವೈದ್ಯರು 10% ಡಿಸ್ಕೌಂಡ್ ನೀಡಲು ಸೂಚನೆ ನೀಡಿದ್ದಾರೆ.
ಆದರೂ ಪಟ್ಟು ಬಿಡದ ಕುಡುಕರು, ಬಿಲ್ ಹೆಚ್ಚಾಗಿದೆ ಎಂದು ಗಲಾಟೆ ಮಾಡಿ ವೈದ್ಯನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲೂ ಇವರಿಬ್ಬರೂ ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ. ವೈದ್ಯರ ಮೇಲೆ ಹಲ್ಲೆ ಮಾತ್ರವಲ್ಲದೇ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಜತೆಗೂ ಅನುಚಿತ ವರ್ತನೆ ಮಾಡಿದ್ದಾರೆ ಎನ್ನಲಾಗಿದೆ.
ಇದೆಲ್ಲವನ್ನೂ ಕಂಡ ಸಿಬ್ಬಂದಿ, 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸಿಬ್ಬಂದಿಗಳ ದೂರು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು, ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.
ಹರೀಶ್ ಹಾಗೂ ರಾಜೇಶ್ರ್ ವಿರುದ್ಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506, 504, 341, 323, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.