More

    ಮಂಗಳೂರಿನ ನೀರುಮಾರ್ಗದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

    ಮಂಗಳೂರು: ನಗರದ ಹೊರ ವಲಯದ ನೀರುಮಾರ್ಗ ಗ್ರಾಮದ ಕೆಲರಾಯಿ ಪ್ರದೇಶದಲ್ಲಿರುವ ಹಂದಿ ಸಾಕಾಣಿಕಾ ಕೇಂದ್ರವೊಂದರ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಈ ರೋಗ ಹರಡುವುದನ್ನು ತಡೆಗಟ್ಟಲು ರಾಷ್ಟ್ರೀಯ ರೋಗ ನಿಯಂತ್ರಣ ಮಾರ್ಗಸೂಚಿಯಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

    ಈ ಹಂದಿ ಸಾಕಾಣಿಕಾ ಕೇಂದ್ರದಿಂದ 1 ಕಿ.ಮೀ. ವ್ಯಾಪ್ತಿಯನ್ನು ರೋಗಪೀಡಿತ ವಲಯ ಮತ್ತು 10 ಕಿ.ಮೀ ವ್ಯಾಪ್ತಿಯನ್ನು ಜಾಗೃತ ವಲಯವೆಂದು ಘೋಷಿಸಲಾಗಿದೆ. ರೋಗಪೀಡಿತ ಹಂದಿಗಳನ್ನು ವಧೆ ಮಾಡಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಆ ಸ್ಥಳದಲ್ಲಿ ಕ್ರಿಮಿನಾಶಕ ಸಿಂಪಡಿಸಲು ಹಾಗೂ ಅಲ್ಲಿಗೆ ಸಾರ್ವಜನಿಕರು ಭೇಟಿ ನೀಡದಂತೆ ನಾಮಫಲಕ ಅಳವಡಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

    ಆಫ್ರಿಕನ್ ಹಂದಿ ಜ್ವರವು ಮನುಷ್ಯರಿಗೆ ಯಾವುದೇ ರೀತಿಯ ರೋಗ ಉಂಟು ಮಾಡುವುದಿಲ್ಲ. ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಲು ಸಲಹೆ ನೀಡಲಾಗಿದೆ. ಜಾಗೃತ ವಲಯದಲ್ಲಿರುವ ಹಂದಿ ಸಾಕಾಣಿಕೆದಾರರು ಮತ್ತು ಇತರರು ಸದ್ಯಕ್ಕೆ ರೋಗ ಪೀಡಿತ ವಲಯಕ್ಕೆ ಭೇಟಿ ನೀಡಬಾರದು ಮತ್ತು ಅಪರಿಚಿತರಿಂದ ಹಂದಿ ಮರಿ ಮತ್ತು ಮಾಂಸವನ್ನು ಖರೀದಿಸಬಾರದು. ತಮ್ಮ ಹಂದಿ ಸಾಕಾಣಿಕಾ ಕೇಂದ್ರಗಳನ್ನು ಬಿಸಿ ನೀರಿನಿಂದ ತೊಳೆದು, ಕ್ರಿಮಿನಾಶಕಗಳನ್ನು ಸಿಂಪಡಿಸುತ್ತಿರಬೇಕು. ಹಂದಿಗಳಿಗೆ ಹೋಟೆಲ್ ತ್ಯಾಜ್ಯಗಳನ್ನು ನೀಡದಿರುವುದು ಒಳಿತು. ಅನಿವಾರ್ಯ ಸಂದರ್ಭ ಚೆನ್ನಾಗಿ ಬೇಯಿಸಿ ನೀಡುವುದು. ಆಫ್ರಿಕನ್ ಹಂದಿ ಜ್ವರವು ಹಂದಿಗಳಿಂದ ಅಥವಾ ಮಾಂಸ ಸೇವಿಸುವುದರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದ್ದರಿಂದ ಸಾರ್ವಜನಿಕರು ಮತ್ತು ಹಂದಿ ಪಾಲಕರು ಭಯಭೀತರಾಗುವ ಅವಶ್ಯಕತೆ ಇಲ್ಲ. ಹಂದಿ ಪಾಲಕರು ಸೂಕ್ತ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾ ಜಾನುವಾರು ರೋಗಗಳ ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts