ಬೆಂಗಳೂರು: ಬೈಕ್ ರೇಸಿಂಗ್ ಕುರಿತು ಕನ್ನಡದಲ್ಲಿ ಚಿತ್ರಗಳಾಗಿದ್ದು ಕಡಿಮೆಯೇ. ಆಗಾಗ ಒಂದೊಂದು ಚಿತ್ರದಲ್ಲಿ ರೇಸಿಂಗ್ ಕುರಿತು ಪ್ರಸ್ತಾಪವಿತ್ತೇ ಹೊರತು, ರೇಸಿಂಗ್ ಕುರಿತು ಯಾವ ಸಿನಿಮಾ ಸಹ ಬಂದಿಲ್ಲ. ಇದೀಗ ಭರತ್ ವಿಷ್ಣುಕಾಂತ್, ‘ರೇಸರ್’ ಎಂಬ ಚಿತ್ರ ಮಾಡುತ್ತಿದ್ದಾರೆ.
‘ರೇಸರ್’ ಒಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಬೈಕ್ ರೇಸರ್ ಆಗಿ ಸಂದೇಶ್ ಪ್ರಸನ್ನ ಅಭಿನಯಿಸುತ್ತಿದ್ದಾರೆ. ನಿಜಜೀವನದಲ್ಲೂ ಅವರು ರೇಸರ್ ಎನ್ನುವುದು ವಿಶೇಷ. ಅವರಿಗೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಭರತ್ ನಿರ್ದೇಶನ ಮಾಡುವುದರ ಜತೆಗೆ, ತಮ್ಮ ಭರತ್ ಫಿಲಂಸ್ ನಡಿ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಾಲಿವುಡ್ ಎಂಟ್ರಿ ಕುರಿತು ಸ್ಪಷ್ಟನೆ ಕೊಟ್ಟ ರಕ್ಷಿತ್ ಶೆಟ್ಟಿ …
ಈ ಚಿತ್ರದ ಕುರಿತು ಮಾತನಾಡುವ ಭರತ್, ‘ನನ್ನ ಗುರು ಖಲೀಮ್ ಮೆಕ್ಯಾನಿಕ್ ಅವರ ಗ್ಯಾರೇಜ್ನಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಅದಕ್ಕೆ ‘ರೇಸರ್’ ಕಥೆ ಮಾಡಿದ್ದೇನೆ. ಈ ಸಿನಿಮಾ ಒಬ್ಬ ಬೈಕ್ ರೇಸರ್ ಕುರಿತದ್ದಾದ್ದರಿಂದ ರಿಯಲ್ ಬೈಕ್ ರೇಸರ್ರನ್ನೇ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದೇನೆ’ ಎಂದು ಚಿತ್ರದ ಬಗ್ಗೆ ಮಾಹಿತಿ ಕೊಡುತ್ತಾರೆ.
ಸಂದೇಶ್ ಪ್ರಸನ್ನ ವೃತ್ತಿಪರ ಸೂಪರ್ ಬೈಕ್ ರೇಸರ್ ಅಂತೆ. ‘ಬೈಕ್ ರೇಸರ್ಗಳು ಅಂತಾರಾಷ್ಟ್ರೀಯ ಚಾಂಪಿಯನ್ಶಿಪ್ಗೆ ಹೋಗಲು ಯಾವೆಲ್ಲ ರೀತಿ ಕಷ್ಟ ಪಡುತ್ತಾರೆ ಎಂಬುದರ ಸುತ್ತ ಕಥೆ ಸುತ್ತುತ್ತದೆ. ಮೊದಲು ನಿರ್ದೇಶಕರು ನನ್ನ ಬಳಿ ಇನ್ಪುಟ್ಸ್ ಕೇಳಿದರು. ಆ ನಂತರ ನೀವೇ ಹೀರೋ ಆಗಿ ಎಂದರು. ಒಬ್ಬ ರೇಸರ್ ಕಥೆ ಈ ಚಿತ್ರದಲ್ಲಿದೆ. ಎಲ್ಲರನ್ನೂ ಹುರಿದುಂಬಿಸುವ ಚಿತ್ರ ಇದಾಗಲಿದೆ’ ಎಂದರು.
ಅದ್ವಿತಿ ಶೆಟ್ಟಿ ಈ ಚಿತ್ರದಲ್ಲಿ ಬೈಕ್ ಪ್ರಿಯೆಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಕುರಿತು ಮಾತನಾಡುವ ಅವರು, ‘ಈ ರೀತಿಯ ಜಾನರ್ ಸಿನಿಮಾದಲ್ಲಿ ನಟಿಸಲು ತುಂಬಾ ಖುಷಿಯಾಗುತ್ತದೆ. ರೇಸಿಂಗ್ ಅನ್ನೋದು ಒಬ್ಬರಿಗೆ ಪ್ಯಾಶನ್ ಆದರೆ, ಇನ್ನೂ ಕೆಲವರಿಗೆ ವೃತ್ತಿಯಾಗಿರುತ್ತದೆ. ನಿಜ ಜೀವನದಲ್ಲಿ ನನಗೆ ಬೈಕ್ ಅಂದ್ರೆ ತುಂಬಾ ಇಷ್ಟ. ಈ ಸಿನಿಮಾದಲ್ಲೂ ಬೈಕ್ ಪ್ರಿಯೆ’ ಎಂದರು.
ಇದನ್ನೂ ಓದಿ: ‘ಪಠಾಣ್’ ಯಶಸ್ಸು: ಈ ದೇಶ ಯಾವತ್ತೂ ಖಾನ್ಗಳನ್ನು ಪ್ರೀತಿಸುತ್ತಲೇ ಬಂದಿದೆ ಎಂದ ಕಂಗನಾ ರಣಾವತ್
‘ರೇಸರ್’ ಚಿತ್ರದ ರೇಸಿಂಗ್ ದೃಶ್ಯಗಳನ್ನು ನೋಯ್ಡಾದಲ್ಲಿರುವ ಬುದ್ದ್ ಇಂಟರ್ ನ್ಯಾಶನಲ್ ಸರ್ಕ್ಯೂಟ್ನಲ್ಲಿ ಚಿತ್ರೀಕರಣ ಮಾಡಲಾಗುತ್ತದಂತೆ. ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಅಲ್ಲಿ ಚಿತ್ರವೊಂದರ ಚಿತ್ರೀಕರಣ ನಡೆಯಲಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಮೈಸೂರು ಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ.
ಸಂದೇಶ ಪ್ರಸನ್ನ ಮತ್ತು ಅದ್ವಿತಿ ಶೆಟ್ಟಿ ಜತೆಗೆ ಭಜರಂಗಿ ಲೋಕಿ, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಬಾಲ ರಾಜ್ವಾಡಿ, ಕಾಮಿಡಿ ಕಿಲಾಡಿ ಸೂರಜ್ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.
ದಾರಿ ತಪ್ಪಿದ್ದ ರಜನಿಕಾಂತ್ ಬದಲಾಗಿದ್ದು ಯಾರಿಂದ ಗೊತ್ತಾ? ಅವರೇ ಹೇಳಿದ್ದಾರೆ ಕೇಳಿ …