ಬಳ್ಳಾರಿ: ಸಿರಗುಪ್ಪ ತಾಲೂಕಿನಲ್ಲಿ ಭತ್ತ ಬೆಳೆಗಾರರು ನಿರಂತರ ವಂಚನೆಗೆ ಒಳಗಾಗುತ್ತಿದ್ದಾರೆ. ಅಧಿಕಾರಿಗಳ ಆಡಳಿತ ವೈಫಲ್ಯವೇ ಇದಕ್ಕೆ ಕಾರಣ ಎಂದು ತುಂಗಭದ್ರಾ ರೈತಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು ಆರೋಪಿಸಿದರು.
ಬಳ್ಳಾರಿ, ಕುರುಗೋಡು, ಕಂಪ್ಲಿ ಹಾಗೂ ಸಿರಗುಪ್ಪ ತಾಲೂಕಿನ ಸುಮಾರು 72 ರೈತರು ಭತ್ತ ಮಾರಾಟ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿರುವ ಸಿರಗುಪ್ಪದ ರೈಸ್ ಮಿಲ್ ಮಾಲೀಕ ನಾಪತ್ತೆಯಾಗಿದ್ದಾರೆ. ರೈಸ್ಮಿಲ್ನಲ್ಲಿ ಭತ್ತದ ದಾಸ್ತಾನು ಇದೆ. ರೈಸ್ ಮಿಲ್ ಮಾಲೀಕರು ಸ್ಥಿತಿವಂತರಾಗಿದ್ದು ರೈತರಿಗೆ ಹಣ ಪಾವತಿಸಲು ಕ್ರಮಕೈಗೊಳ್ಳಬೇಕೆಂದು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಂಪ್ಲಿಯ ರೈತ ನಾರಾಯಣಪ್ಪ ಮಾತನಾಡಿ, ಸಿರಗುಪ್ಪದ ವಿಜಯಲಕ್ಷ್ಮಿ ರೈಸ್ಮಿಲ್ ಜತೆ ಕಳೆದ ಮೂರು ವರ್ಷಗಳಿಂದ ವಹಿವಾಟು ನಡೆಸುತ್ತಿದ್ದೇವೆ. ಪ್ರಸಕ್ತ ವರ್ಷವೂ ನಾನು ಹಾಗೂ ನಮ್ಮ ಸಹೋದರರು ಭತ್ತ ಮಾರಾಟ ಮಾಡಿದ್ದೇವೆ. ರೈಸ್ ಮಿಲ್ ಮಾಲೀಕ ಹಣ ನೀಡುವುದಾಗಿ ಭರವಸೆ ನೀಡಿ ಕುಟುಂಬ ಸಮೇತ ಪರಾರಿಯಾಗಿದ್ದಾರೆ ಎಂದು ಆರೋಪಿಸಿದರು. ರೈತ ಮುಖಂಡರಾದ ವೀರೇಶ ಗಂಗಾವತಿ, ತಿಮ್ಮಾರೆಡ್ಡಿ, ಬಸವನಗೌಡ, ಶಿವಶಂಕರ, ರಂಗಪ್ಪ ಹಾಗೂ ಇತರರು ಹಾಜರಿದ್ದರು.
ಸರ್ಕಾರ ತುಂಗಭದ್ರಾ ಅಣೆಕಟ್ಟೆ ಬದಲಿಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ತುಮಕೂರು ಜಿಲ್ಲೆಯ ಪಾವಗಡಕ್ಕೆ ನೀರು ಪೂರೈಸುವ ಯೋಜನೆ ರೂಪಿಸಬಹುದಾಗಿತ್ತು. ಸರ್ಕಾರದ ನಿರ್ಧಾರದಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಸಂಕಷ್ಟ ಹೆಚ್ಚಲಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಜನಪ್ರತಿನಿಧಿಗಳು ಪಾವಗಡ ಯೋಜನೆ ಬಗ್ಗೆ ಮೌನಕ್ಕೆ ಶರಣಾಗಿರುವುದು ದುರದೃಷ್ಟಕರ.
| ಪುರುಷೋತ್ತಮಗೌಡ ದರೂರು, ತುಂಗಭದ್ರಾ ರೈತಸಂಘದ ಅಧ್ಯಕ್ಷ