ಸುಶಾಂತ್ ಸಿಂಗ್ ಸಾವಿಗೆ ಪರೋಕ್ಷವಾಗಿ ಕಾರಣರಾದ ಕರಣ್ ಜೋಹರ್ ಅವರು ತಮಗೆ ಸಿಕ್ಕ ಪದ್ಮಶ್ರೀ ಪ್ರಶಸ್ತಿಯನ್ನು ತಕ್ಷಣವೇ ವಾಪಸ್ಸು ಕೊಡಬೇಕು ಎಂದು ಇತ್ತೀಚೆಗಷ್ಟೇ ಕಂಗನಾ ರಣಾವತ್ ಹೇಳಿದ್ದರು. ಇದೀಗ ಅವರ ಮಾತುಗಳು ಸುಳ್ಳಾಗಿರುವುದರಿಂದ, ಆಕೆ ತನಗೆ ಸಿಕ್ಕ ಪ್ರಶಸ್ತಿಯನ್ನು ವಾಪಸ್ಸು ಕೊಡಬೇಕು ಎಂದು ಹಿರಿಯ ನಟ ಆದಿತ್ಯ ಪಂಚೋಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನನ್ನ ಮುಂದಿನ ಚಿತ್ರಕ್ಕೂ ನೀವೇ ಹಾಡ್ತೀರಾ ಅಂತ ನಂಬಿಕೆ ಇದೆ …
ಆದಿತ್ಯ ಪಂಚೋಲಿ ಮತ್ತು ಕಂಗನಾ ರಣಾವತ್ ಇಬ್ಬರದ್ದೂ ಹಳೆಯ ಸ್ನೇಹ. ಕಂಗನಾ ಅವರನ್ನು ಬಾಲಿವುಡ್ಗೆ ಪರಿಚಯಿಸಿದ್ದು ಇದೇ ಆದಿತ್ಯ. ಆದರೆ, ಒಂದು ಹಂತದಲ್ಲಿ ಅವರಿಬ್ಬರ ನಡುವಿನ ಸ್ನೇಹ-ಸಂಬಂಧ ಕಳಚಿ ಹೋಯಿತು. ಇಬ್ಬರೂ ಶರಂಪರ ಕಿತ್ತಾಡಿಕೊಂಡು, ಒಬ್ಬರ ಮೇಲೊಬ್ಬರು ಕೇಸ್ ಹಾಕಿಕೊಂಡಿದ್ದಾರೆ. ಆ ಕೇಸ್ಗಳು ಇನ್ನೂ ನ್ಯಾಯಾಲಯದಲ್ಲಿವೆ.
ಹೀಗಿರುವಾಗಲೇ ಆದಿತ್ಯ ಪಂಚೋಲಿ, ಕಂಗನಾ ತನಗೆ ಸಿಕ್ಕಿರುವ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಅದಕ್ಕೆ ಕಾರಣ, ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಬಾಲಿವುಡ್ನಲ್ಲಿ ಕಂಗನಾ ದೊಡ್ಡ ಮಟ್ಟಿಗೆ ನೆಪೋಟಿಸಂ (ಸ್ವಜನಪಕ್ಷಪಾತ) ಚರ್ಚೆ ಶುರುಮಾಡಿದರು. ಅಷ್ಟೇ ಅಲ್ಲ, ಇದೇ ವಿಷಯವಾಗಿ ಅವರು ಹಲವರ ಕಾಲೆಳೆದರು.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಆದಿತ್ಯ, ‘ಒಬ್ಬರ ಮೂರ್ಖತನದಿಂದ ಎಷ್ಟೆಲ್ಲಾ ಜನ ತಲೆ ತಗ್ಗಿಸಬೇಕಾಯಿತು. ಇದು ನ್ಯಾಯವಲ್ಲ. ಎಲ್ಲರೂ ಸ್ವಲ್ಪ ಜವಾಬ್ದಾರಿಯುತವಾಗಿ ವರ್ತಿಸಬೇಕು. ಸುಶಾಂತ್ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿಗೆ ನನ್ನ ಮಗ ಕಾರಣ ಎಂದು ಹೇಳಲಾಯಿತು. ನಾನು ಸೋಷಿಯಲ್ ಮೀಡಿಯಾದಲ್ಲಿ ಇಲ್ಲ. ಆದರೆ, ಸೂರಜ್ನನ್ನು ಕೊಲೆಗಾರರಾಗಿ ಬಿಂಬಿಸಿದರು’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರೊನಾದಿಂದ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಸಹೋದರ ನಿಧನ
‘ಕಂಗನಾ ಅವರ ನೆಪೋಟಿಸಂ ಥಿಯರಿ ಇದೀಗ ಸುಳ್ಳಾಗಿದೆ. ತನ್ನ ಮಾತು ಸುಳ್ಳಾದರೆ, ಪದ್ಮಶ್ರೀ ಪ್ರಶಸ್ತಿ ವಾಪಸ್ಸು ಕೊಡುತ್ತೀನಿ ಎಂದು ಹೇಳಿದ್ದಳು. ಇದೀಗ ಕೊಡಲಿ ನೋಡೋಣ. ಸ್ವತಃ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ಅವರೇ ಎಲ್ಲೂ ನೆಪೋಟಿಸಂ ವಿಷಯವಾಗಿ ಮಾತನಾಡಿಲ್ಲ. ಬಹಳ ಸ್ಪಷ್ಟವಾಗಿ ಅವರು ರಿಯಾ ಮೇಲೆ ಸೆಕ್ಷನ್ 306 ಕೇಸ್ ದಾಖಲಿಸಿದ್ದಾರೆ. ಹೀಗಿರುವಾಗ ಕಂಗನಾ ಮಾತ್ರ ಎಲ್ಲರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ’ ಎಂದು ಆದಿತ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.