ಬೆಂಗಳೂರು: ಖ್ಯಾತ ನಟಿ ಸುಧಾರಾಣಿ ಅಣ್ಣನ ಮಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಪರದಾಟ ನಡೆಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಕಿಡ್ನಿ ಸ್ಟೋನ್ ಸಮಸ್ಯೆ ಹಿನ್ನೆಲೆ ಅಣ್ಣನ ಮಗಳನ್ನು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲು ಸುಧಾರಾಣಿ ಹೊರಟಿದ್ದರು. ಆದರೆ, ಚಿಕಿತ್ಸೆ ಕೊಡಲು ಅಪೊಲೋ ಆಸ್ಪತ್ರೆ ಮಂಡಳಿ ನಿರಾಕರಿಸಿದೆ. ಕಳೆದ 3-4 ವರ್ಷಗಳಿಂದ ಸುಧಾರಾಣಿ ಸಂಬಂಧಿ ಅಪೋಲೋ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ಹೊರಗಿನಿಂದ ಬರುವ ರೋಗಿಗಳನ್ನು ಅಡ್ಮಿಟ್ ಮಾಡಿಸಿಕೊಳ್ಳದ ಖಾಸಗಿ ಆಸ್ಪತ್ರೆ, ಐಸೋಲೇಶನ್, ಎಮರ್ಜೆನ್ಸಿ ವಾರ್ಡ್ ಖಾಲಿ ಇದ್ದರೂ ಸಹ ಚಿಕಿತ್ಸೆಗೆ ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಿಡ್ನಿ ಸ್ಟೋನ್ ಸಮಸ್ಯೆ ಬಂದಾಗ ಅವಳಿಗರ ವಿಪರೀತ ಜ್ವರ ಬರುತ್ತದೆ. ಈಗ ಎಮ್.ಎಸ್ ರಾಮಯ್ಯ ಆಸ್ಪತ್ರೆಗೆ ಹೋಗ್ತಿದ್ದೀವಿ. ನಮ್ಮಂತ ಕಲಾವಿದರಿಗೇ ಇಂತಹ ಸ್ಥಿತಿ ಎದುರಾದ್ರೇ ಸಾಮಾನ್ಯ ಜನರ ಕತೆಯೇನು ಎಂದು ದಿಗ್ವಿಜಯ ನ್ಯೂಸ್ ಜೊತೆ ನಟಿ ಸುಧಾರಾಣಿ ಬೇಸರ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಕಮಿಷನರ್ ಅಭಯ
ಸುಧಾರಾಣಿ ಅವರ ಸಮಸ್ಯೆಗೆ ಕೂಡಲೇ ಸಹಕರಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವೈದ್ಯರಿಗೆ ಕರೆ ಮಾಡಿದ್ದಾರೆ. ಇದರ ಬೆನ್ನಲ್ಲೇ ವೈದ್ಯರು ಬಂದು ಆರೋಗ್ಯ ಸಮಸ್ಯೆ ಆಲಿಸಿದ್ದಾರೆ. ಆಸ್ಪತ್ರೆ ಒಳಗೆ ಕರೆದೊಯ್ದು ಚಿಕಿತ್ಸೆ ನೀಡಲು ಒಪ್ಪಿ, ಪ್ರಥಮ ಚಿಕಿತ್ಸೆ ಮಾತ್ರ ನೀಡಿದ್ದಾರೆ. ಬಳಿಕ ಅಡ್ಮಿಟ್ ಆಗಲು ಎಮ್ ಎಸ್ ರಾಮಯ್ಯ ಆಸ್ಪತ್ರೆಗೆ ಸುಧಾರಾಣಿ ಕರೆತಂದಿದ್ದು, ಖಾಸಗಿ ಆಸ್ಪತ್ರೆಗಳ ಬೇಜಾವ್ದಾರಿತನಕ್ಕೆ ಸುಧಾರಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ನಾಳೆ ಕೆಜಿಎಫ್ ಖಳನ ಕ್ರೌರ್ಯ ಅನಾವರಣ