ಬೆಂಗಳೂರು: ಚಿತ್ರಮಂದಿರಗಳ ಮಾಲೀಕರು, ಸಿನಿಮಾ ಇಂಡಸ್ಟ್ರಿಯವರಿಗೆ ನಿನ್ನೆಯಷ್ಟೇ ಸಿಕ್ಕಿದ್ದ ಸ್ವಲ್ಪ ನಿರಾಳತೆ ಜಿಮ್ ಮಾಲೀಕರಿಗೂ ಸಿಗುತ್ತಾ ಎಂಬ ಪ್ರಶ್ನೆಯೊಂದು ಈಗ ಮೂಡಿದೆ. ಏಕೆಂದರೆ ಸಿನಿಮಾದವರ ಪರವಾಗಿ ನಿನ್ನೆ ಎದ್ದಿದ್ದಂಥದ್ದೇ ದನಿಯೊಂದು ಈಗ ಜಿಮ್ ಮಾಲೀಕರ ಪರವಾಗಿಯೂ ಎದ್ದಿದ್ದು, ಗಮನ ಸೆಳೆಯಲಾರಂಭಿಸಿದ್ದಷ್ಟೇ ಅಲ್ಲದೆ, ಉತ್ತಮ ಸ್ಪಂದನೆಯನ್ನೂ ಪಡೆಯಲಾರಂಭಿಸಿದೆ.
ಚಿತ್ರಮಂದಿರಗಳಲ್ಲಿ ಶೇ. 50 ಆಸನಗಳಿಗಿಂತ ಹೆಚ್ಚಿನ ಜನರಿಗೆ ಅವಕಾಶ ಕೊಡುವಂತಿಲ್ಲ ಎಂದು ಸರ್ಕಾರ ನಿರ್ಬಂಧ ಹೇರಿದ್ದರಿಂದ ಚಿತ್ರರಂಗ ಆತಂಕಕ್ಕೆ ಒಳಗಾಗಿತ್ತು. ಅದರಲ್ಲೂ ಈ ವಾರವಷ್ಟೇ ಬಿಡುಗಡೆ ಆಗಿದ್ದ ಯುವರತ್ನ ಸಿನಿಮಾಗೆ ಇದು ದೊಡ್ಡ ಹೊಡೆತ. ಕೂಡಲೇ ನಿರ್ಬಂಧ ಸಡಿಲಿಸಿ ಎಂದು ಚಿತ್ರರಂಗದ ಅನೇಕರು ದನಿ ಎತ್ತಿದ್ದರು. ಖ್ಯಾತ ನಟರಾದ ಶಿವರಾಜ್ಕುಮಾರ್, ಸುದೀಪ್, ಯಶ್, ಜಗ್ಗೇಶ್, ಧನಂಜಯ, ವಸಿಷ್ಠ ಸಿಂಹ, ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ, ಸಂತೋಷ್ ಆನಂದ್ರಾಮ್, ನಿರ್ಮಾಪಕರಾದ ವಿಜಯ್ ಕಿರಗಂದೂರು, ಕೆ.ಪಿ. ಶ್ರೀಕಾಂತ್ ಮುಂತಾದವರು ಟ್ವಿಟರ್ನಲ್ಲಿ ಒಂದು ಅಭಿಯಾನವನ್ನೇ ಹಮ್ಮಿಕೊಂಡಿದ್ದರು. ಇದು ನಿನ್ನೆಯ ಮಟ್ಟಿಗೆ ಇಂಡಿಯಾ ಟ್ರೆಂಡಿಂಗ್ ಕೂಡ ಆಗಿತ್ತು. ನಂತರ ಸಂಜೆ ಬಳಿಕ ಯುವರತ್ನ ಚಿತ್ರದ ನಾಯಕ ಪುನೀತ್ ರಾಜ್ಕುಮಾರ್, ನಿರ್ದೇಶಕ ಸಂತೋಷ್ ಆನಂದ್ರಾಮ್, ನಿರ್ಮಾಪಕ ವಿಜಯ್ ಕಿರಗಂದೂರು ಮುಂತಾದವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ, ನಿರ್ಬಂಧ ಸಡಿಲಿಸುವಂತೆ ಕೋರಿದ್ದರು. ಮಾತ್ರವಲ್ಲ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಕೂಡ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಚಿತ್ರಮಂದಿರ ಭರ್ತಿಗೆ ವಿಧಿಸಿದ್ದ ನಿರ್ಬಂಧವನ್ನು ಹಿಂಪಡೆದ ಸರ್ಕಾರ, ಈ ಸಂಬಂಧ ಏ. 7ರ ಮಧ್ಯರಾತ್ರಿ ವರೆಗೆ ವಿನಾಯಿತಿ ನೀಡಿದೆ. ಮಾತ್ರವಲ್ಲ, ಆ ಬಳಿಕ ಹೊಸ ಸೂಚನೆ ಹೊರಡಿಸುವುದಾಗಿ ತಿಳಿಸಿತ್ತು.
ಇದನ್ನೂ ಓದಿ: ‘ಕಾಲೂರಲು’ ಸಿಗದ ‘ಬೆಂ’ಬಲ; ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ?
ಹೀಗೆ ನಿನ್ನೆ ‘ಯುವರತ್ನ’ ಪರವಹಿಸಿದ್ದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದ ರಾಕಿಂಗ್ ಸ್ಟಾರ್ ಯಶ್ ಇಂದು ಜಿಮ್ ಮಾಲೀಕರ ಪರವಾಗಿ ಕಸರತ್ತು ಆರಂಭಿಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಜಿಮ್ಗಳನ್ನು ಮುಚ್ಚಬೇಕು ಎಂದು ನಿರ್ಬಂಧ ಹೊರಡಿಸಿದ್ದಕ್ಕೆ ಆಕ್ಷೇಪಿಸಿ ಅವರು ಟ್ವೀಟ್ ಮಾಡಿದ್ದಾರೆ. ಅನ್ನ ಹುಟ್ಟಿಸದ ಸಭೆ, ಸಮಾರಂಭ, ಮೆರವಣಿಗೆಗಳು ಮುಕ್ತ. ಹೊಟ್ಟೆ ಹೊರೆಯಲು ಮಾಡುವ ವೃತ್ತಿಗಳಿಗೆ ಹೊಡೆತ. ಅಪಘಾತ ಆಗುವುದೆಂದು ವಾಹನ ಸಂಚಾರ ನಿಲ್ಲಿಸುವುದು ಸರಿಯೇ? ಕಟ್ಟುನಿಟ್ಟಿನ ಸಂಚಾರಕ್ರಮ ಸಾಕಲ್ಲವೇ? ಜಿಮ್ ಬಳಸಲು ಅನುಮತಿ ನೀಡಿದರೆ ಗ್ರಾಹಕರ ಆರೋಗ್ಯಕ್ಕೂ ಒಳ್ಳೆಯದು, ಜಿಮ್ ಮಾಲೀಕರೂ ಬದುಕಿಕೊಳ್ಳುತ್ತಾರಲ್ಲವೇ? ರೋಗಕ್ಕೆ ಪರಿಹಾರ ಏನೆಂದು ನಮಗ್ಯಾರಿಗೂ ಗೊತ್ತಿಲ್ಲ. ಆದರೆ ಹಸಿವೆಗೆ ಪರಿಹಾರ ಗೊತ್ತಿದೆಯಲ್ಲ! ಎಂಬ ತಮ್ಮ ಅನಿಸಿಕೆಯನ್ನು ಅವರು ಟ್ವೀಟ್ ಮಾಡಿದ್ದಾರೆ. #savefitnessindustry ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಯಶ್ ಮಾಡಿರುವ ಈ ಟ್ವೀಟ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವರು ಅದೇ ಹ್ಯಾಷ್ಟ್ಯಾಗ್ನೊಂದಿಗೆ ಅವರ ಟ್ವೀಟ್ ರಿಟ್ವೀಟ್ ಮಾಡಿಕೊಂಡು ಬೆಂಬಲ ವ್ಯಕ್ತಪಡಿಸಲಾರಂಭಿಸಿದ್ದಾರೆ.
#savefitnessindustry pic.twitter.com/qCMGrYatzk
— Yash (@TheNameIsYash) April 4, 2021
ಮತ್ತೊಂದೆಡೆ ಜಿಮ್ಗೆ ವಿಧಿಸಿರು ನಿರ್ಬಂಧ ತೆರವಿಗೆ ಆಗ್ರಹಿಸಿ ಬಿಬಿಎಂಪಿ ಆಯುಕ್ತ ಹಾಗೂ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸುವ ಸಲುವಾಗಿ ನಾಳೆ ಬೆಳಗ್ಗೆ 10ಕ್ಕೆ ಜಿಮ್ ಮಾಲೀಕರೆಲ್ಲ ಬೆಂಗಳೂರಿನ ಪುರಭವನದ ಎದುರು ಜಮಾಯಿಸಲು ನಿರ್ಧರಿಸಿ, ಕರೆ ನೀಡಿದ್ದಾರೆ. . #savefitnessindustry #savegym ಹ್ಯಾಷ್ಟ್ಯಾಗ್ ಮೂಲಕ ಕರೆ ನೀಡಿರುವ ಅವರು, ಕೋವಿಡ್ಗೆ ಹೆದರುವುದು ಬೇಡ, ಅದರ ವಿರುದ್ಧ ಹೋರಾಡೋಣ ಎಂದಿದ್ದಾರೆ. ಚಿತ್ರಮಂದಿರಗಳ ವಿಷಯದಲ್ಲಿ ಮಣಿದ ಸರ್ಕಾರ ಈಗ ಜಿಮ್ ಮಾಲೀಕರ ಒತ್ತಡಕ್ಕೂ ಮಣಿಯುತ್ತದಾ ಎಂಬ ಕುತೂಹಲ ಈಗ ಮೂಡಿದೆ.
ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ
ಸಿನಿಮಾ ಥಿಯೇಟರ್ ಹೌಸ್ಫುಲ್ಗೆ ಬ್ರೇಕ್; ಸಿಎಂ ಭೇಟಿ ಮಾಡಿ, ಆದೇಶ ಹಿಂಪಡೆಯಲು ಮನವಿ ಮಾಡಿದ ಪುನೀತ್
ಸ್ವಲ್ಪ ಉಸಿರು ಬಿಡುವಂತಾದ ಯುವರತ್ನ; ನಿರ್ಮಾಪಕರು, ಚಿತ್ರಮಂದಿರ ಮಾಲೀಕರಿಗೆ 4 ದಿನ ಕೊಂಚ ನಿರಾಳ!