ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಒಂದೆರಡು ದಿನಗಳಿಂದ ಉಂಟಾಗಿದ್ದ ಉಸಿರುಗಟ್ಟಿಸುವ ವಾತಾವರಣ ಸದ್ಯಕ್ಕೆ ನಿವಾರಣೆಯಾಗಿದ್ದು, ‘ಯುವರತ್ನ’ ಸ್ವಲ್ಪ ಉಸಿರಾಡುವಂತಾಗಿದೆ. ಆದರೆ ಈ ನಿರಾಳತೆ ಇನ್ನೊಂದು ಮೂರು ದಿನಗಳ ಕಾಲವಷ್ಟೇ ಇರಲಿದ್ದು, ಆಮೇಲೇನು ಎಂಬ ಚಿಂತೆ ಇನ್ನೂ ದೂರವಾಗಿಲ್ಲ.
ಕರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಕೆಲವು ನಿರ್ಬಂಧಗಳನ್ನು ವಿಧಿಸಿದ್ದ ರಾಜ್ಯ ಸರ್ಕಾರ, ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗಷ್ಟೇ ಅವಕಾಶ ಇದೆ ಎಂದು ಸೂಚಿಸಿತ್ತು. ಹೀಗಾಗಿ ಮೊನ್ನೆಮೊನ್ನೆಯಷ್ಟೇ ಬಿಡುಗಡೆಯಾಗಿದ್ದ ಯುವರತ್ನ ಸಿನಿಮಾ ಕಲೆಕ್ಷನ್ಗೂ ದೊಡ್ಡ ಹೊಡೆತ ಬಿದ್ದಿದ್ದಲ್ಲದೆ, ಚಿತ್ರರಂಗದ ಇತರ ನಿರ್ಮಾಪಕರು, ಸಿನಿಮಾ ಕಲಾವಿದರು, ನಟ-ನಟಿಯರು ಕೂಡ ಆತಂಕಕ್ಕೆ ಒಳಗಾಗಿದ್ದರು.
ಇದನ್ನೂ ಓದಿ: ಬೈಕ್ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಸರ್ಕಾರದ ಈ ನಿರ್ಬಂಧದ ವಿರುದ್ಧ ಯುವರತ್ನ ಚಿತ್ರತಂಡ ಮಾತ್ರವಲ್ಲದೆ ಚಿತ್ರರಂಗದ ಅನೇಕರು ದನಿ ಎತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಕೂಡ ಮಾಡಿದ್ದು, ಅದು ಇಂಡಿಯಾ ಟ್ರೆಂಡಿಂಗ್ ಕೂಡ ಆಗಿತ್ತು. ಬಳಿಕ ನಟ ಪುನೀತ್ ರಾಜ್ಕುಮಾರ್, ನಿರ್ದೇಶಕ ಸಂತೋಷ್ ಆನಂದರಾಮ್, ನಿರ್ಮಾಪಕ ವಿಜಯ್ ಕಿರಗಂದೂರು ಮುಂತಾದವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನಿರ್ಬಂಧ ಸಡಿಲಿಸುವಂತೆ ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ
ಮತ್ತೊಂದೆಡೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಕೂಡ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈಗಾಗಲೇ ಮುಂಗಡವಾಗಿ ಹಲವಾರು ಟಿಕೆಟ್ಗಳು ಬುಕ್ ಆಗಿವೆ. ಮಾತ್ರವಲ್ಲದೆ ಸಾಕಷ್ಟು ಮುಂಚಿತವಾಗಿ ತಿಳಿಸದೆ ನಿರ್ಬಂಧ ಜಾರಿಗೊಳಿಸಿದ್ದರಿಂದ ತುಂಬಾ ತೊಂದರೆ ಆಗಿದೆ ಎಂದು ಕೋರಿಕೊಂಡಿದೆ. ಇದಕ್ಕೆ ಸ್ಪಂದಿಸಿರುವ ಸರ್ಕಾರ ಒಂದಷ್ಟು ಕಾಲಾವಕಾಶ ನೀಡಿದ್ದು, ಸದ್ಯ ವಿಧಿಸಲಾಗಿರುವ ನಿರ್ಬಂಧವನ್ನು ಕೊಂಚ ಸಡಿಲಿಸುವುದಾಗಿ ಹೇಳಿದೆ. ಅಂದರೆ ಶೇ. 50 ಆಸನಗಳನ್ನಷ್ಟೇ ಭರ್ತಿ ಮಾಡುವ ಷರತ್ತನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದು, ಏ. 7ರ ವರೆಗೆ ವಿನಾಯಿತಿ ನೀಡಲಾಗುವುದು. ಏ. 7ರ ರಾತ್ರಿ 12ರಿಂದ ಇದನ್ನು ಜಾರಿಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಸಿನಿಮಾ ಥಿಯೇಟರ್ ಹೌಸ್ಫುಲ್ಗೆ ಬ್ರೇಕ್; ಸಿಎಂ ಭೇಟಿ ಮಾಡಿ, ಆದೇಶ ಹಿಂಪಡೆಯಲು ಮನವಿ ಮಾಡಿದ ಪುನೀತ್