ರಾಮನಗರ: ಚನ್ನಪಟ್ಟಣ ತಾಲೂಕಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಪೇಟೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಯುವಕರು ಮಂಗಳವಾರಪೇಟೆಯಲ್ಲಿ ಪೆಟ್ರೋಲ್ ಬಂಕ್ನಲ್ಲಿ ಬುಲೆಟ್ಗೆ ಪೆಟ್ರೋಲ್ ಹಾಕಿಸಿಕೊಂಡು ರಸ್ತೆಗೆ ಬಂದಾಗ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಬೆಂಗಳೂರಿನಿಂದ ಮೈಸೂರಿಗೆ ಸಂಚರಿಸುತ್ತಿತ್ತು. ಯುವಕರು ಕೆಲಸಕ್ಕೆ ಹೋಗುವುದಕ್ಕಾಗಿ ಚನ್ನಪಟ್ಟಣ ಕಡೆಗೆ ಹೊರಟಿದ್ದರು.
ನತದೃಷ್ಟ ಯುವಕರನ್ನು ಚನ್ನಪಟ್ಟಣದ ಕೂಡ್ಲೂರು ಗ್ರಾಮದ ನಿವಾಸಿಗಳಾದ ಸಚಿನ್(22) ಮತ್ತು ಪ್ರತಾಪ್(18) ಎಂದು ಗುರುತಿಸಲಾಗಿದೆ. ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೃತದೇಹಗಳನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.