ರಮೇಶ ಹಾರ್ಸಿಮನೆ ಸಿದ್ದಾಪುರ
ತಾಲೂಕಿನ ಜೋಗ-ಮಾವಿನಗುಂಡಿ ಕಿಲಾರವರೆಗೆ (2.5 ಕಿಮೀ) ಏರಿಯಲ್ ಬಂಚ್ಡ್ ಕೇಬಲ್(ಎಬಿಸಿ) ದುಬಾರಿ ವೆಚ್ಚದ ವಿದ್ಯುತ್ ಲೈನ್ ಅನ್ನು ಹೆಸ್ಕಾಂ ಪ್ರಾಯೋಗಿಕವಾಗಿ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದೆ.
ಸಿದ್ದಾಪುರ ತಾಲೂಕು ವ್ಯಾಪ್ತಿಯ ಜೋಗ ಹಾಗೂ ಮಾವಿನಗುಂಡಿಗೆ ಮೆಸ್ಕಾಂ ವಿಭಾಗದ ಬಚ್ಚಗಾರ್ ಫೀಡರ್ನಿಂದ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಆದರೆ, ಈಗ ಹೆಸ್ಕಾಂ ಸಿದ್ದಾಪುರ ತಾಲೂಕು ವ್ಯಾಪ್ತಿಯ ಜೋಗದವರೆಗೂ ಹೊಸದಾಗಿ ಆರಂಭಗೊಂಡಿರುವ ಹಲಗೇರಿ ಫೀಡರ್ನಿಂದ ಪ್ರಾಯೋಗಿಕವಾಗಿ ದುಬಾರಿ ವೆಚ್ಚದ ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದೆ.
ಒಮ್ಮೆ ಹೆಸ್ಕಾಂ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯವಾದರೆ ಮೆಸ್ಕಾಂ ವಿಭಾಗದಿಂದಲೂ ವಿದ್ಯುತ್ ಸಂಪರ್ಕ ನೀಡಲು(ಜೋಗ-ಮಾವಿನಗುಂಡಿಯವರೆಗೆ) ವ್ಯವಸ್ಥೆ ಮಾಡಲಾಗಿದೆ. ಈ ದುಬಾರಿ ವೆಚ್ಚದ ಕೇಬಲ್ ಅಳವಡಿಸುವುದರಿಂದ ಅರಣ್ಯ ನಾಶವಾಗಲಿ, ಪರಿಸರಕ್ಕೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಹಾಗೂ ಕಾಡುಪ್ರಾಣಿಗಳಿಗೂ ಇದರಿಂದ ಯಾವುದೇ ಅಪಾಯ ಇಲ್ಲ. ಮಲೆನಾಡಿನಲ್ಲಿ ವಿದ್ಯುತ್ ಸಂಪರ್ಕ ನೀಡಬೇಕಾದರೆ ಸಾಮಾನ್ಯವಾಗಿ ನೂರಾರು ಮರಗಳು ನಾಶವಾಗುವುದರ ಜತೆಗೆ ಪರಿಸರಕ್ಕೂ ಹಾನಿ ಉಂಟಾಗುತ್ತಿರುವ ಈ ಸಂದರ್ಭದಲ್ಲಿ ಹಾಗೂ ಮಳೆ-ಗಾಳಿಯಿಂದ ವಿದ್ಯುತ್ ಸಂಪರ್ಕ ಕಡಿತವಾಗುವುದು, ಇನ್ಸುಲೇಟರ್ ಪಂಚರ್ ಆಗುವುದು ತಪ್ಪುವುದರಿಂದ ದುಬಾರಿ ವೆಚ್ಚದ ವಿದ್ಯುತ್ ತಂತಿ ಅಳವಡಿಸಿ ನಿರಂತರ ವಿದ್ಯುತ್ ಸಂಪರ್ಕ ನೀಡುವುದು ಉತ್ತಮ ಎನ್ನುವ ಮಾತು ಕೇಳಿಬಂದಿದೆ.