ಮಂಗಳೂರು: ಕಾರು ಚಾಲಕನೊಬ್ಬ ಆಂಬುಲೆನ್ಸ್ಗೆ ಸುಮಾರು 40 ಕಿ.ಮೀ. ವರೆಗೂ ದಾರಿ ಬಿಡದೆ ಪುಂಡಾಟ ಮೆರೆದಿದ್ದಾನೆ.
ನಿನ್ನೆ(ಬುಧವಾರ) ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಉತ್ತರ ಕನ್ನಡದ ಭಟ್ಕಳಕ್ಕೆ ರೋಗಿಯನ್ನು ಕರೆದುಕೊಂಡು ಆಂಬುಲೆನ್ಸ್ ಹೋಗುತ್ತಿತ್ತು. ಈ ವೇಳೆ KA19 MD6843 ನಂಬರ್ ಪ್ಲೇಟ್ ಹಾಕಿದ್ದ ಕಾರು ಚಾಲಕನೊಬ್ಬ ಆಂಬುಲೆನ್ಸ್ಗೆ ದಾರಿ ಬಿಡದೆ ಸತಾಯಿಸಿದ್ದಾನೆ. ಮೂಲ್ಕಿಯಿಂದ ಉಡುಪಿವರೆಗೂ ಆಂಬುಲೆನ್ಸ್ ಮುಂದೆಯೇ ಸಂಚರಿಸುತ್ತಾ ದಾರಿ ಬಿಡದೆ ಉದ್ಧಟತನ ಪ್ರದರ್ಶಿಸಿದ್ದಾನೆ.
ಅಷ್ಟೇ ಅಲ್ಲ, ಅಂದು ರಾತ್ರಿ ಮಣಿಪಾಲದಿಂದ ಮಂಗಳೂರಿಗೆ ಬರುತ್ತಿದ್ದ ಮತ್ತೊಂದು ಆಂಬುಲೆನ್ಸ್ಗೂ ಇದೇ ಕಾರು ಅಡ್ಡ ಬಂದು ತೊಂದರೆ ಕೊಟ್ಟಿದೆ.
ಆಂಬುಲೆನ್ಸ್ಗಳಿಗೆ ದಾರಿ ಬಿಡುವ ಮೂಲಕ ಅಪಾಯದಲ್ಲಿರುವವರ ಪ್ರಾಣ ಉಳಿವಿಗೆ ನೆರವಾಗುವುದು ಪ್ರತಿಯೊಬ್ಬರ ಜವಾಬ್ದಾರಿ. ಟ್ರಾಫಿಕ್ ಪೊಲೀಸರು ಕೂಡ ಆಂಬುಲೆನ್ಸ್ನ ಸುಗಮ ಸಂಚಾರಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾ ಪದೇಪದೆ ಅರಿವು ಮೂಡಿಸುತ್ತಿದ್ದಾರೆ. ಆದರೆ, ಈ ಕಾರು ಚಾಲಕ ಮಾತ್ರ ಅಮಾನವೀಯವಾಗಿ ವರ್ತಿಸುತ್ತಾ ಪುಂಡಾಟ ಮೆರೆದಿದ್ದಾನೆ. ಈ ಕಾರು ಚಾಲಕನ ವರ್ತನೆಯನ್ನ ಆಂಬುಲೆನ್ಸ್ ಸಿಬ್ಬಂದಿಯೇ ವಿಡಿಯೋ ಮಾಡಿದ್ದಾರೆ. ಈ ದೃಶ್ಯ ವೈರಲ್ ಆಗಿದ್ದು, ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ದಟ್ಟವಾಗಿ ಕೇಳಿಬರುತ್ತಿದೆ.