ತುಮಕೂರು: ಆರೋಪಿಯನ್ನು ಬಂಧಿಸಲು ಬಾಡಿಗೆ ಕಾರು ತರಲು ದೂರದಾರರಿಗೆ ತಾಕೀತು ಮಾಡಿದ್ದ ಸಬ್ ಇನ್ಸ್ಪೆಕ್ಟರ್ಗೆ ಪಾಠ ಕಲಿಸಲು ತನ್ನ ಕಾರನ್ನೇ ದೂರುದಾರನಿಗೆ ಕೊಟ್ಟು ಕಳುಹಿಸಿದ್ದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡೆಗೆ ಗೃಹಸಚಿವ ಆರಗ ಜ್ಞಾನೇಂದ್ರ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಪೊಲೀಸರು ಸಾರ್ವಜನಿಕ ಹಿತ ಕಾಪಾಡುವ ಬದ್ಧತೆ ತೋರಬೇಕು. ಪೊಲೀಸ್ ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ವಿಭಿನ್ನ ಶೈಲಿಯಲ್ಲಿ ತೋರಿಸಿದ ತುಮಕೂರಿನ ಎಸ್ಪಿ ರಾಹುಲ್ ಕುಮಾರ್ ಶಹಾಪೂರವಾಡ್ ಅವರ ನಡೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಕರಣವೇನು?: ತುರುವೇಕೆರೆ ತಾಲೂಕಿನ ಕೋಡಿಹಳ್ಳಿಯಲ್ಲಿ 3 ತಿಂಗಳ ಹಿಂದೆ ಪ್ರಕಾಶ್ ಎಂಬುವವರ ಪುತ್ರ ಚಂದನ್ ಹಾಗೂ ನಾಗೇಂದ್ರಪ್ಪ ನಡುವೆ ಜಮೀನು ವಿವಾದಕ್ಕೆ ಜಗಳವಾಗಿತ್ತು. ಈ ವೇಳೆ ನಾಗೇಂದ್ರಪ್ಪ ಮತ್ತು ಇವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಪ್ರಕಾಶ್ ಹಾಗೂ ಚಂದನ್ ವಿರುದ್ಧ ಐಪಿಸಿ ಸೆಕ್ಷನ್ 307ರಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪ್ರಕಾಶ್ ಜಾಮೀನು ಪಡೆದಿದ್ದು ಚಂದನ್ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಬಂಧಿಸುವಂತೆ ದೂರುದಾರ ಪದೇಪದೆ ದಂಡಿನಶಿವರ ಪೊಲೀಸ್ ಠಾಣೆಗೆ ಅಲೆಯುತ್ತಿದ್ದರೂ ಸ್ಪಂದನೆ ಸರಿಯಾಗಿ ಸಿಕ್ಕಿರಲಿಲ್ಲ. ಜ.13ರಂದು ಮತ್ತೆ ಪೊಲೀಸರಿಗೆ ನಾಗೇಂದ್ರಪ್ಪ ಮನವಿ ಮಾಡಿದಾಗ, ಆರೋಪಿಯನ್ನು ಬಂಧಿಸಲು ಬಾಡಿಗೆ ಕಾರು ತೆಗೆದುಕೊಂಡು ಬಾ ಎಂದು ದಂಡಿನಶಿವರ ಠಾಣೆ ಸಬ್ಇನ್ಸ್ಪೆಕ್ಟರ್ ಶಿವಲಿಂಗಯ್ಯ ಹೇಳಿದ್ದರು. ಇದರಿಂದ ಬೇಸರಗೊಂಡ ನಾಗೇಂದ್ರಪ್ಪ, ಎಸ್ಐ ವಿರುದ್ಧ ನಾಗೇಂದ್ರಪ್ಪ ಎಸ್ಪಿಗೆ ದೂರು ನೀಡಿದ್ದರು. ಎಸ್ಪಿ ಅವರು ತಾವು ಬಳಸುವ ಕಾರನ್ನೇ ಡ್ರೈವರ್ ಸಮೇತ ಕಳುಹಿಸಿದ್ದರು. ಎಸ್ಪಿ ಕಾರು ದಂಡಿನಶಿವರ ಠಾಣೆ ಎದುರು ನಿಲ್ಲುತ್ತಿದ್ದಂತೆ ಬೆವೆತು ಹೋದ ಪೊಲೀಸರು ಕಳೆದ 3 ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮರುದಿನವೇ ಬಂಧಿಸಿದ್ದರು.
ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ತುಮಕೂರು ಎಸ್ಪಿ! ಠಾಣೆ ಮುಂದೆ ಕಾರು ಬರ್ತಿದ್ದಂತೆ ಪಿಎಸ್ಐ ಗಢಗಢ
ಸೋಲದೇವನಹಳ್ಳಿ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ಕೊಟ್ಟದ್ದೇ ಮಾಲೀಕನ ಪತ್ನಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
6 ವರ್ಷದ ಮಗನ ಜತೆ ತಡರಾತ್ರಿ ಗಂಡ ಆತ್ಮಹತ್ಯೆ! ಡೆತ್ನೋಟ್ನಲ್ಲಿದೆ ಪತ್ನಿ ಮತ್ತು ಎಲ್ಐಸಿ ಏಜೆಂಟ್ ಕೊಟ್ಟ ಕಾಟ…