ಬೆಂಗಳೂರು: ಸೋಲದೇವನಹಳ್ಳಿಯ ಯೂ ಟರ್ನ್ ಡಾಬಾಗೆ ಬೆಂಕಿ ಬಿದ್ದು ಓರ್ವ ನೌಕರ ಮೃತಪಟ್ಟ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಡಾಬಾ ಮಾಲೀಕನ ಪತ್ನಿಯೇ ಡಾಬಾಕ್ಕೆ ಬೆಂಕಿ ಹಚ್ಚಲು ಸುಪಾರಿ ಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಡಾಬಾ ಮಾಲೀಕ ಅರ್ಪಿತ್ಗೆ ಕೆಲ ವರ್ಷಗಳ ಹಿಂದೆ ಮ್ಯಾಟ್ರಿಮೊನಿಯಲ್ನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಸ್ಟಾಫ್ಟ್ವೇರ್ ಇಂಜಿನಿಯರ್ ಆಗಿರುವ ಶೀತಲ್ನ ಪರಿಚಯವಾಗಿತ್ತು. ನಂತರ ಅರ್ಪಿತ್, ಶೀತಲ್ಳನ್ನು ವಿವಾಹವಾಗಿದ್ದ. ಮದ್ವೆಯಾದ ನಾಲ್ಕು ತಿಂಗಳಲ್ಲೇ ಇಬ್ಬರ ನಡುವೆ ವೈಮನಸ್ಸು ಶುರುವಾಗಿತ್ತು. ಪ್ರತಿನಿತ್ಯ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಶೀತಲ್ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಳು. ಈ ನಡುವೆ ಆಕೆಯ ತಂದೆಗೆ ಅನಾರೋಗ್ಯವಾಗಿತ್ತು. ಆದರೂ ಶೀತಲ್ಳನ್ನು ನೋಡಲು ಗಂಡ ಬಂದಿರಲಿಲ್ಲ. ಇದರಿಂದ ಆಕ್ರೋಶಗೊಂಡ ಶೀತಲ್, ಗಂಡನಿಗೆ ಪಾಠ ಕಲಿಸಬೇಕೆಂದು ತನ್ನ ಅಣ್ಣ ನಿಶ್ಚಲ್ ಜತೆ ಸೇರಿ ಅರ್ಪಿತ್ನನ್ನು ಬೆದರಿಸಲು ಸಂಚು ರೂಪಿಸಿದ್ದಳು. ಅದೇ ಸಂದರ್ಭದಲ್ಲಿ ಶೀತಲ್ನ ಬಾಲ್ಯದ ಗೆಳೆಯ ರೌಡಿ ಮನುಕುಮಾರ್ ಸಿಕ್ಕಿದ್ದ. ಮನುಕುಮಾರ್ ಬಳಿ ಶೀತಲ್ ಈ ವಿಚಾರ ಪ್ರಸ್ತಾಪಿಸಿದ್ದಳು. ಅರ್ಪಿತ್ ಆರ್ಥಿಕ ಸಂಕಷ್ಟಕ್ಕೆ ಒಳಗಾದ್ರೆ ತನ್ನ ಬಳಿ ಬರ್ತಾನೆ ಎಂದು ಭಾವಿಸಿದ ಶೀತಲ್, ಡಾಬಾಗೆ ಬೆಂಕಿ ಹಚ್ಚುವ ಪ್ಲ್ಯಾನ್ ಮಾಡಿದ್ದಳು.
ಅದರಂತೆ ಡಾಬಾಕ್ಕೆ ಬೆಂಕಿ ಹಚ್ಚಲು ಶೀತಲ್ ಬಳಿ ಮನುಕುಮಾರ್ 20 ಸಾವಿರ ರೂ. ಸುಪಾರಿ ಕೇಳಿದ್ದ. ಅದರಂತೆ ಮೊದಲ ಬಾರಿ 15 ಸಾವಿರ ರೂ. ಹಾಗೂ ನಂತರ 5 ಸಾವಿರ ರೂ. ಕೊಟ್ಟಿದ್ದಳು. ಸುಪಾರಿ ಪಡೆದ ಮನು ತನ್ನ ಸಹಚರರಾದ ಹೇಮಂತ್, ಮಂಜುನಾಥ್ಗೆ 5 ಸಾವಿರ ರೂ. ಕೊಟ್ಟು ಡಾಬಾಗೆ ಬೆಂಕಿ ಹಚ್ಚಲು ಸೂಚಿಸಿದ್ದ. 2021ರ ಡಿ.23ರ ರಾತ್ರಿ 12 ಗಂಟೆಗೆ ಆರೋಪಿಗಳು ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಬೆಂಕಿ ಉರಿಯುತ್ತಿರುವುದನ್ನು ಕಂಡು ಡಾಬಾ ಸಿಬ್ಬಂದಿ ಮನೋಜ್ ಬಾಗಿಲು ತೆರೆದಾಗ ಆತನ ಮೈಗೂ ಬೆಂಕಿ ತಗುಲಿತ್ತು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಡಿ.28ರಂದು ಡಾಬಾ ಸಿಬ್ಬಂದಿ ಮನೋಜ್ ಮೃತಪಟ್ಟಿದ್ದ.
ಸುಳಿವು ಕೊಟ್ಟ ಸಿಸಿ ಕ್ಯಾಮರಾ: ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿನ 45ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ಗಳ ಸಿಸಿ ಕ್ಯಾಮರಾ ಪರಿಶೀಲಿಸಿದ್ದರು. ಈ ಪೈಕಿ ಡಿ.23ರಂದು ಒಂದು ಬಂಕ್ನಿಂದ ರಾತ್ರಿ ಹೇಮಂತ್ ಮತ್ತು ಮಂಜುನಾಥ್ ಕ್ಯಾನ್ನಲ್ಲಿ ಪೆಟ್ರೋಲ್ ತುಂಬಿಕೊಂಡು ಬೈಕ್ನಲ್ಲಿ ಹೋಗುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಕಂಡು ಬಂದಿತ್ತು. ಇಬ್ಬರನ್ನೂ ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ರೌಡಿ ಮನುಕುಮಾರ್ ಸೂಚನೆ ಮೇರೆಗೆ ಡಾಬಾಗೆ ಬೆಂಕಿ ಹಚ್ಚಿರುವುದಾಗಿ ಹೇಳಿದ್ದರು. ಆರೋಪಿಗಳಾದ ರೌಡಿ ಮನುಕುಮಾರ್ (42), ಸಹಚರರಾದ ಹೇಮಂತ್(34) , ಮಂಜುನಾಥ್ (32) ನನ್ನು ಪೊಲೀಸರು ಬಂಧಿಸಿದ್ದಾರೆ. ಸುಪಾರಿ ಕೊಟ್ಟಿದ್ದ ಶೀತಲ್ ಹಾಗೂ ಆಕೆಯ ಅಣ್ಣ ನಿಶ್ಚಲ್ ತಲೆಮರೆಸಿಕೊಂಡಿದ್ದಾರೆ.
ಪತಿ ಮತ್ತೆ ಸಿಗಬಹುದೆಂದು ಕೃತ್ಯ: ಡಾಬಾಗೆ ಬೆಂಕಿ ಹಚ್ಚಿದರೆ ಅರ್ಪಿತ್ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮತ್ತೆ ನನ್ನ ಬಳಿ ಬರಬಹುದು ಎಂಬ ಉದ್ದೇಶದಿಂದ ಶೀತಲ್ ಸುಪಾರಿ ಕೊಟ್ಟಿದ್ದಾಳೆ. ಡಾಬಾ ಸಿಬ್ಬಂದಿ ಮನೋಜ್ನನ್ನು ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಆತನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಮನುಕುಮಾರ್ ಮತ್ತು ಹೇಮಂತ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ, ಸುಲಿಗೆ, ದರೋಡೆ ಸಂಚು, ಅಪಹರಣ, ಗಲಾಟೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ತುಮಕೂರು ಎಸ್ಪಿ! ಠಾಣೆ ಮುಂದೆ ಕಾರು ಬರ್ತಿದ್ದಂತೆ ಪಿಎಸ್ಐ ಗಢಗಢ
ಅಪಘಾತದಲ್ಲಿ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವು: ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಘೋರ ಸತ್ಯ ಇಲ್ಲಿದೆ
ಪ್ರೇಯಸಿಯನ್ನ ಕೊಂದು ಶವಕ್ಕೆ ಸ್ನಾನ ಮಾಡಿಸಿ ಇಡೀ ರಾತ್ರಿ ಅದರೊಟ್ಟಿಗೆ ಇದ್ದ! ಬೆಳಗಾಗುತ್ತಿದ್ದಂತೆ ನಾಟಕ ಶುರು…