ಬೆಂಗಳೂರು:
ರಾಜ್ಯದಲ್ಲಿ 1.50 ಲಕ್ಷ ತೆಂಗು ಬೆಳೆಗಾರರು ನೋಂದಣಿ ಮಾಡಿಕೊಂಡಿಲ್ಲ. ಅವರಿಗೂ ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪತ್ರ ಬರೆಯಲಾಗಿದೆ ಎಂದು ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಮೇಲ್ಮನೆಯಲ್ಲಿ ತಿಳಿದ್ದಾರೆ.
ಕಾಂಗ್ರೆಸ್ನ ಎಸ್ ರವಿ ಅವರು, ಗೊಬ್ಬರಿ ಬೆಲೆ ಇಳಿಮುಖವಾಗಿದೆ, ಸಮರ್ಪಕವಾದ ಬೆಲೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಇಳುವರಿ ಕೂಡ ಕಡಿಮೆ ಆಗಿದೆ ಎಂದು ಸರ್ಕಾರದ ಗಮನಕ್ಕೆ ತಂದರು.
ಸಚಿವ ಶಿವಾನಂದ ಪಾಟೀಲ್ ಉತ್ತರಿಸಿ, ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ಕೂಡ ಕ್ವಿಂಟಾಲ್ಗೆ 1250 ರೂ. ಬೆಂಬಲ ಬೆಲೆ ನೀಡುತ್ತಿದೆ. ಬೆಂಬಲ ಬೆಲೆಯಲ್ಲಿ ಈಗಾಗಲೇ 54 ಸಾವಿರ ಮೆಟ್ರಿಕ್ ಟನ್ ಮಾತ್ರ ಕೇಂದ್ರ ಖರೀದಿಸಿದೆ. ಇನ್ನೂ ಹೆಚ್ಚು ಖರೀದಿಸಲು ಮನವಿ ಮಾಡಿದ್ದೇವೆ ಎಂದರು.
ಸರ್ಕಾರದ ಕೋರಿಕೆ ಮೇರೆಗೆ ಈಗ ಒಂದು ತಿಂಗಳು ಖರೀದಿ ಸಮಯ ವಿಸ್ತರಿಸಿದ್ದಾರೆ. ಆದರೆ ಹೊಸ ನೋಂದಣಿಗೆ ಅವಕಾಶ ಮಾಡಿಲ್ಲ. ಆದ್ದರಿಂದ ಸಮಸ್ಯೆಯಾಗಿದೆ ಎಂದರು.
ಜೆಡಿಎಸ್ನ ಕುಮಾರಸ್ವಾಮಿ ಸಹ ಬಿಜೆಪಿ ಜೊತೆ ಸೇರಿರುವುದರಿಂದ ಶಕ್ತಿ ಹೆಚ್ಚಾಗಿದೆ. ತೆಂಗು ಬೆಳೆಗಾರರ ಪರವಾಗಿ ಮಾತನಾಡಿ ಬೆಂಬಲ ಬೆಲೆ ಕೊಡಿಸಲಿ ಎಂದರು.
ಲಿಂಬೆ ಬದಲು ಕೊಬ್ಬರಿ
ತಂದ ಸಚಿವ ರೇವಣ್ಣ
ಕಾಂಗ್ರೆಸ್ನ ಎಸ್.ರವಿ ಮಾತನಾಡಿ, ಕೇಂದ್ರ ಸರ್ಕಾರದ ನೀತಿಯಿಂದ ಈ ಸಂಕಷ್ಟ ಎದುರಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ರೈತ ವಿರೋಧಿಯಾಗಿ ವರ್ತಿಸುತ್ತಿವೆ. ಆದ್ದರಿಂದ ಮುಖ್ಯಮಂತ್ರಿಗಳು ತೆಂಗು ಬೆಳೆಗಾರರ ಪರ ಮಾತನಾಡಬೇಕು ಎಂದು ಒತ್ತಾಯಿಸಿದರು.
ಮೊನ್ನೆ ಜೆಡಿಎಸ್ನ ರೇವಣ್ಣ ಕೊಬ್ಬರಿ ಹಿಡಿದು ಬಂದು ಗಮನ ಸೆಳೆದಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಕ್ಕೆ, ರೇವಣ್ಣ ಮೊದಲು ಲಿಂಬೆ ಹಣ್ಣು ತರುತ್ತಿದ್ದರು. ಈಗ ಕೊಬ್ಬರಿ ತರುತ್ತಿದ್ದಾರೆ ಎಂದು ರವಿ ವ್ಯಂಗ್ಯವಾಡಿದಾಗ ಸದನ ನಗೆಗಡಲಲ್ಲಿ ಮುಳುಗಿತು.