ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕೊಂದರ ಕ್ಯಾಷಿಯರ್ಗೆ 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 2.19 ಕೋಟಿ ರೂ. ದಂಡ ವಿಧಿಸಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಬ್ಯಾಂಕ್ ಕ್ಯಾಷಿಯರ್ ಬಿ. ದಿನೇಶ್ ಶಿಕ್ಷೆಗೊಳಗಾಗಿರುವ ಅಪರಾಧಿ.
ಮೈಸೂರು ಜಿಲ್ಲೆಯ ಪೆರಿಯಪಟ್ಟಣದಲ್ಲಿರುವ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಹೆಡ್ ಕ್ಯಾಷಿಯರ್ ಆಗಿದ್ದ ದಿನೇಶ್, ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಸರ್ಕಾರದ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದರು.
ಡಿಮಾನಿಟೈಸೇಷನ್ ಆಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆ ಉಲ್ಲಂಘಿಸಿ, ಅಮಾನ್ಯೀಕರಣಗೊಂಡ 2,18,46,300 ರೂ. ಮೊತ್ತದ ನೋಟುಗಳನ್ನು ಚಾಲ್ತಿಯಲ್ಲಿರುವ ಹಣಕ್ಕೆ ಬದಲಿಸಿಕೊಟ್ಟು ವಂಚನೆ ಎಸಗಿದ ಆರೋಪದ ಮೇಲೆ ದಿನೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಂದು ತೀರ್ಪಿತ್ತ ಸಿಬಿಐ ವಿಶೇಷ ನ್ಯಾಯಾಲಯ, ದಿನೇಶ್ಗೆ 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 2,19,35,000 ರೂ. ಕಠಿಣ ಶಿಕ್ಷೆ ವಿಧಿಸಿದೆ.
ಬೇರೆ ಖಾತೆದಾರರು ಜಮಾ ಮಾಡಿದ್ದ ಮೊತ್ತದಲ್ಲಿನ ಡಿನಾಮಿನೇಷನ್ಗಳನ್ನು ಬದಲಿಸಿ, ಬೇರೊಬ್ಬರಿಗೆ ಹಣ ಪರಿವರ್ತಿಸಿಕೊಳ್ಳಲು ದಿನೇಶ್ ಕಾನೂನುಬಾಹಿರವಾಗಿ ಅನುಕೂಲ ಮಾಡಿಕೊಟ್ಟಿದ್ದ. ಈ ಸಂಬಂಧ 2016ರಲ್ಲಿ ಸಿಬಿಐ ಕೇಸು ದಾಖಲಿಸಿಕೊಂಡಿದ್ದು, 2017ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಬೆಂಗಳೂರು ಬಿಟ್ಟು ಹೈದರಾಬಾದ್ಗೆ ಬನ್ನಿ ಎಂದ ತೆಲಂಗಾಣ ಸಚಿವ; ದಿಟ್ಟ ಉತ್ತರ ಕೊಟ್ಟ ಡಾ.ಕೆ.ಸುಧಾಕರ್