ಕುಣಿಗಲ್: ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರ ಭಾರಿ ಸುದ್ದಿಯಲ್ಲಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸ್ಪರ್ಧಿಸಿದ್ದರು. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಕೊನೇ ಕ್ಷಣದಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಕೈತಪ್ಪಿತ್ತು. ಅಂತಿಮವಾಗಿ ಸ್ಪರ್ಧೆಯಿಂದ ಕಾಂಗ್ರೆಸ್ ಹಿಂದೆ ಸರಿದಿತ್ತು. ಎಸ್ಪಿಎಂಗೆ ಟಿಕೆಟ್ ತಪ್ಪಿದ್ದರ ಹಿಂದಿನ ಕೈ ಯಾರದ್ದು? ಎಂಬ ಕುತೂಹಲಕ್ಕೆ ಇದೀಗ ಸ್ವತಃ ಎಸ್ಪಿಎಂ ತೆರೆ ಎಳೆದಿದ್ದಾರೆ.
ಜಿಲ್ಲೆಯ ಜನರು, ಮುಖಂಡರು ನನ್ನ ಸರ್ಧೆ ಬಯಸಿದ್ದರು. ಆದರೆ, ನನ್ನನ್ನು ಎರಡನೇ ಸಲ ಎಂಪಿ ಆಗದಂತೆ ತಡೆದ ಮಹಾನುಭಾವರ ಬಗ್ಗೆ ನನ್ನ ಬಳಿ ಮಾಹಿತಿಯಿದೆ. ದೇಶದಲ್ಲಿ ಎಲ್ಲ ಲೋಕಸಭಾ ಸದಸ್ಯರಿಗೆ ಟಿಕೆಟ್ ಕೊಟ್ಟು ನನಗೊಬ್ಬನಿಗೆ ಟಿಕೆಟ್ ಕೊಡದೆ ಸ್ಪಧಿರ್ಸಲು ಅವಕಾಶ ನೀಡಲಿಲ್ಲ, ನನಗೇಕೆ ಟಿಕೆಟ್ ನೀಡಲಿಲ್ಲ ಎಂದು ಕೇಂದ್ರದ ನಾಯಕರನ್ನು ಪ್ರಶ್ನಿಸಿದೆ, ಯಾರೊಬ್ಬರೂ ಉತ್ತರ ನೀಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್ಗೆ ಹತ್ತಿರವಾಗಿದ್ದ ನನ್ನನ್ನು ಎರಡನೇ ಸಲ ಸಂಸತ್ ಪ್ರವೇಶಿಸದಂತೆ ದೊಡ್ಡ ಷಡ್ಯಂತ್ರ ಮಾಡಿದ ಮಹಾನುಭಾವರ ಮಾಹಿತಿ ನನ್ನ ಬಳಿಯಿದೆ. ಸಮಯ ಬಂದಾಗ ಬಹಿರಂಗಪಡಿಸುತ್ತೇನೆ. ಎಂಪಿ ಟಿಕೆಟ್ ಕಿತ್ತುಕೊಂಡು ನನ್ನ ರಾಜಕೀಯವಾಗಿ ಮುಗಿಸಲು ನಡೆಸಿರುವ ಕುತಂತ್ರಕ್ಕೆ ಕುಣಿಗಲ್ ಜನರೇ ಉತ್ತರ ನೀಡುತ್ತಾರೆ ಎಂದು ಪರೋಕ್ಷವಾಗಿ ಡಿಕೆ ಬ್ರದರ್ಸ್ ವಿರುದ್ಧ ಎಸ್ಪಿಎಂ ಕಿಡಿಕಾರಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ನಿಂದ ಸ್ಪರ್ಧಿಸಲು ಸಜ್ಜಾಗಿರುವ ಎಸ್ಪಿಎಂ ಕ್ಷೇತ್ರದ ದೇವಮೂಲೆ ಗಿಡದಪಾಳ್ಯ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಸೋಮವಾರ ಚುನಾವಣಾ ರಣಕಹಳೆ ಮೊಳಗಿಸಿದರು. ಈ ವೇಳೆ ಮಾತನಾಡಿದ ಎಸ್ಪಿಎಂ, ಕುಣಿಗಲ್ ಕ್ಷೇತ್ರದ ಜನರನ್ನು ನಂಬಿ ನನ್ನ ಮನೆ ದೇವರಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದೇನೆ, ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಸತತ ಐದು ಬಾರಿ ಟಿಕೆಟ್ ತಪ್ಪಿಸಿರುವ ಬಗ್ಗೆ ಜನರಿಗೂ ಮಾಹಿತಿಯಿದೆ. ಈ ಬಗ್ಗೆ ಕುಣಿಗಲ್ ಜನತಾ ನ್ಯಾಯಾಲಯದ ಮುಂದೆ ನನಗಾದ ಅನ್ಯಾಯ ಒಪ್ಪಿಸುತ್ತೇನೆ. ಕುಣಿಗಲ್ ರಾಜಕಾರಣ ಹಾಗೂ ನಾನು ಎರಡನೇ ಬಾರಿ ಸಂಸತ್ ಸದಸ್ಯನಾಗಬಾರದು ಎಂಬ ವಿಷಯಗಳ ನಡುವೆ ನೇರವಾದ ಸಂಬಂಧವಿದೆ. ಈ ಬಗ್ಗೆ ಅಗತ್ಯ ಸಂದರ್ಭದಲ್ಲಿ ಜನರ ಮುಂದಿಡುತ್ತೇನೆ ಎಂದರು.
ಕುಣಿಗಲ್ ಕ್ಷೇತ್ರದಲ್ಲಿ ಸತತ ಎರಡು ಬಾರಿ ಶಾಸಕರಾಗಿದ್ದ ಮುದ್ದಹನುಮೇಗೌಡ ತಾಲೂಕಿನಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದಾರೆ. ಹಾಗಾಗಿ, ಈ ರಾಜಕೀಯ ಸಂದಿಗ್ಧ ಪರಿಸ್ಥಿತಿಯಲ್ಲಿ ಬಹುತೇಕ ಕಾಂಗ್ರೆಸ್ ಮುಖಂಡರು ಎಸ್ಪಿಎಂ ಜತೆ ಗುರುತಿಸಿಕೊಳ್ಳುವ ಸಾಧ್ಯತೆಯಿದೆ. ಅವರ ಸ್ಪರ್ಧೆ ಖಚಿತವಾದರೆ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಬಿರುಗಾಳಿಯೇ ಬರಲಿದೆ. ಹಾಲಿ ಶಾಸಕರೂ ಕೂಡ ಕಾಂಗ್ರೆಸ್ ಪಕ್ಷದವರೇ ಆದರೂ ಕುಣಿಗಲ್ ಕಾಂಗ್ರೆಸ್ನಲ್ಲಿ ಎಸ್ಪಿಎಂ ಪರವಾದ ವಾತಾವರಣವಿರಲಿದೆ ಎಂಬ ನಂಬಿಕೆ ಅವರ ಬೆಂಬಲಿಗರಲ್ಲಿದೆ.
ಸೇತುವೆ ಮೇಲಿಂದ ಪ್ರಪಾತಕ್ಕೆ ಕಾರು ಪಲ್ಟಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳು ದಾರುಣ ಸಾವು