ಬೆಂಗಳೂರು: ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ ‘ರಾಜಕುಮಾರ’ನಂತೆ ಮೆರೆದಿದ್ದ ಕರುನಾಡಿನ ‘ವೀರ ಕನ್ನಡಿಗ’, ಸ್ಯಾಂಡಲ್ವುಡ್ನ ‘ಪವರ್ಸ್ಟಾರ್’, ಕನ್ನಡಿಗರ ಪ್ರೀತಿಯ ಅಪ್ಪು ಇನ್ನು ನೆನಪು ಮಾತ್ರ.
ಕಂಠೀರವ ಸ್ಟುಡಿಯೋದಲ್ಲಿ ಇಂದು ಬೆಳಗ್ಗೆ ಸಕಲ ಸರ್ಕಾರಿ ಗೌರವದೊಂದಿಗೆ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದ್ದು, ಕುಟುಂಬಸ್ಥರು, ಅಭಿಮಾನಿಗಳ ಆಕ್ರಂದ ಮುಗಿಲು ಮುಟ್ಟಿದೆ. ಅಪ್ಪ-ಅಮ್ಮನ ಸಮಾಧಿ ಬಳಿಯೇ ಪುನೀತ್ ಲೀನವಾಗಿದ್ದಾರೆ.
ಕಂಠೀರವ ಸ್ಟೇಡಿಯಂನಿಂದ ಹೂವಿನ ಪಲ್ಲಕ್ಕಿಯಲ್ಲಿ ಭಾನುವಾರ ಮುಂಜಾನೆಯೇ ಪುನೀತ್ರ ಪಾರ್ಥಿವ ಶರೀರವನ್ನ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ತರಲಾಯಿತು. ಬಳಿಕ ಈಡಿಗ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ರಾಜ್ ಕುಟುಂಬಸ್ಥರು ಅಂತಿಮ ವಿಧಿವಿಧಾನ ನೆರವೇರಿಸಿದರು. ಇದಕ್ಕೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ರ ಹಣೆಗೆ ಮುತ್ತಿಟ್ಟು ಭಾವುಕ ವಿದಾಯ ಹೇಳಿದರು.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಗೊತ್ತಿದ್ದರೂ ಲಕ್ಷಾಂತರ ಮಂದಿ ಕಂಠೀರವ ಸ್ಟೇಡಿಯಂ ಬಳಿ ರಾತ್ರಿಯಿಂದಲೇ ಕಾಯುತ್ತಾ ‘ಅಪ್ಪು… ಅಪ್ಪು… ಅಪ್ಪು…’ ಎಂದು ಆಕ್ರಂದಿಸುತ್ತಿದ್ದ ದೃಶ್ಯ ಕರುಳು ಕಿವುಚಿದಂತಿದೆ. ಇನ್ನು ಅಮ್ಮನನ್ನ ತಬ್ಬಿಕೊಂಡು ಕಣ್ಣೀರಿಟ್ಟ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.
ಪುನೀತ್ಗೆ ಗಂಡು ಮಕ್ಕಳಿಲ್ಲದ ಕಾರಣ ರಾಘವೇಂದ್ರ ರಾಜ್ಕುಮಾರ್ ಅವರ ಮಗ ವಿನಯ್ ರಾಜ್ಕುಮಾರ್ ಅವರು ಚಿಕ್ಕಪ್ಪನ ಅಂತ್ಯಕಾರ್ಯ ನೆರವೇರಿಸಿದರು. ಬೆಳಗ್ಗೆ 7.30ಕ್ಕೆ ಪುನೀತ್ ಮಣ್ಣಲ್ಲಿ ಮಣ್ಣಾದರು.
ಸಾವಿಗೂ ಮುನ್ನಾ ಪುನೀತ್ ಕರೆ ಮಾಡಿದ್ದು ಯಾರಿಗೆ? ಅದೆಲ್ಲವೂ ಕೊನೆಯಾಗಿಯೇ ಉಳಿಯಿತಲ್ಲ…
ಬೆಂಗಳೂರಿಗೆ ಆಗಮಿಸಿದ ಪುನೀತ್ ಪುತ್ರಿ ಧೃತಿ: ನೋವಿನ ಭಾರ ಹೊತ್ತುಕಂಡೇ ಹೆಜ್ಜೆ ಹಾಕಿದ ಮಗಳು…