ಚಂದನವನದ ‘ರಾಜಕುಮಾರ’ ಪುನೀತ್ ರಾಜ್ಕುಮಾರ್ ಬಾರದ ಲೋಕಕ್ಕೆ ಹೋಗಿದ್ದು, ಕೋಟ್ಯಂತರ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಅವರ ಹಠಾತ್ ನಿಧನ ಇಡೀ ರಾಜ್ಯಕ್ಕೇ ಆಘಾತ ತಂದಿದೆ. ಪ್ರೀತಿಯ ಅಪ್ಪು ಅಗಲಿಕೆಗೆ ಇಡೀ ಕರುನಾಡೇ ಕಂಬನಿ ಮಿಡಿಯುತ್ತಿದೆ. ಎಲ್ಲೆಡೆ ಭಾರವಾದ ಮನಸ್ಸಿನಲ್ಲೇ ಪುನೀತ್ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಅವರ ಅಭಿಮಾನಿ ಚನ್ನಕೇಶವ ಜಿ. ಲಾಳನಕಟ್ಟೆ ಎಂಬುವರು ನೋವಿನಲ್ಲೂ ‘ಪುನೀತ್ ರಾಜ್ಕುಮಾರ್’ ಕುರಿತು ಕವಿತೆ ಬರೆದು ಅಕ್ಷರದ ಮೂಲಕ ನಮನ ಸಲ್ಲಿಸಿದ್ದಾರೆ. ಅವರ ಈ ಕವಿತೆಗಳ ಸಾಲು ಓದುತ್ತಿದ್ದರೆ ಮನಸ್ಸು ಮತ್ತಷ್ಟು ಭಾರವಾಗುತ್ತೆ.
ಕರುನಾಡು ಕಣ್ಣೀರು ಸುರಿಸಿಹುದಯ್ಯ…
ಹುಟ್ಟಿ ಬಾರಯ್ಯ
ಮೆಟ್ಟಿ ಮೆರೆಯಯ್ಯ
ಈ ನಾಡು ನಿನಗಾಗಿ ಕಾಯ್ವುದಯ್ಯ
ನಮಗಾಗಿ ನೀವು
ನಟನೆಯಲಿ ಮೇರು
ಈ ಬೀಡು ಹಸಿರು ನೀವಯ್ಯ
ನಿನ್ನ ಭಾವವೂ
ಎಲ್ಲೂ ಕಾಣದೆ
ಕರುನಾಡು ಕಣ್ಣೀರು ಸುರಿಸಿಹುದಯ್ಯ
ನಿನ್ನ ಛಾಯೆಯೂ
ಅವನ ಮಾಯೆಯು
ಹೊತ್ತೊಯ್ದ ಅವನನ್ನ ಶಪಿಸುವೆವಯ್ಯ
ನೀನಂದ್ರೆ ಅಪ್ಪು
ನಿನಗಾಗಿ ಬೆಪ್ಪು
ಆಗಿಹುದು ಕರುನಾಡ ಅಭಿಮಾನವಯ್ಯ
ಬಂದುಬಿಡು ಮರಳಿ
ಹೊಗದಿರು ತೆರಳಿ
ನಿನಗಾಗಿ ಕಾಯುವೆವು ಹುಟ್ಟಿ ಬಾರಯ್ಯ
ನೀವೆಮಗೆ ದೈವ
ನಿಮ್ಮಿಂದ ಭಾವ
ನಟನ ಚತುರತೆಗೆ ನೀವೆ ಉಸಿರಯ್ಯ
ನಟಸಾರ್ವಭೌಮ
ನಟನೆಯಲಿ ಶೂರ
ವೀರ ಧೀರ ದಯಾಮಯನಯ್ಯ
ಶೌರ್ಯದಲಿ ಮೌರ್ಯ
ಸೌಮ್ಯದ ಪೃಥ್ವಿ
ಕರುನಾಡ ರಾಜಕುಮಾರ ನೀನಯ್ಯ
ದಾನದಲಿ ಕರ್ಣ
ದೀನರಿಗೆ ಬಂದು
ವಿಧಿಯ ಆಟಕ್ಕೆ ಬಲಿಯಾದೆಯಯ್ಯ
ಅಂಧರಿಗೆ ಕಣ್ಣು
ಧೀಮಂತ ಎಂದೂ
ದಿಗಂತದಾಚೆಗೂ ಹೆಸರಿಹುದಯ್ಯ.
– ಚನ್ನಕೇಶವ ಜಿ. ಲಾಳನಕಟ್ಟೆ
ಬೆಟ್ಟದ ಹೂವ ತಂದವ ಕಾಣದಂತೆ ಮಾಯವಾದವ
ಮರೆಯಾದ ಕನ್ನಡಿಗ
ಕರುನಾಡ ಮನೆ ಮಗ
ಬೆಟ್ಟದ ಹೂವ ತಂದವ
ಕಾಣದಂತೆ ಮಾಯವಾದವ
ಮುತ್ತುರಾಜನ ಸುತ
ಪಾರ್ವತಮ್ಮನ ಹಿತ
ಅಭಿಮಾನಿಗಳ ಮೊಗ
ಚಿತ್ರರಂಗವೆ ಇವಗೆ ಜಗ
ಜವನಿಗೇಕೊ ಕೋಪ
ಇವನ ನೋಡುವ ತವಕ
ಕರೆಸಿಕೊಂಡನೆ ಅದಕ
ಇವನೆ ನಮ್ಮ ಮಾಣಿಕ್ಯ
ನಟನೆಯಲ್ಲಿ ಭಂಟ
ಕಂಚಿನ ಕಂಠ
ಇವನಿಗಿಲ್ಲ ಸಾಟಿ
ಇವನೆ ಸಾವಿರದ ಕೋಟಿ
ಚಿರನಿದ್ರೆಗೆ ಜಾರಿದ
ಭೂಲೋಕವ ತೊರೆದ
ಸ್ವರ್ಗಕ್ಕೆ ಸೇರಿದ
ಕರುನಾಡ ಸುತನಿವ
– ಚನ್ನಕೇಶವ ಜಿ. ಲಾಳನಕಟ್ಟೆ
ಕಳಿಸಿ ಕೊಡೊ ನಿನ್ನ ದಮ್ಮಯ್ಯ…
ಮರಳಿ ಬಾರದ ಲೋಕಕೆ
ಕಾಲವೆ ಕರೆದೆಯ ಏತಕೆ?
ಕಾರಣವಿಲ್ಲದೆ ಕರೆದೆಯ
ವಿಧಿಯೆ ಏನಿದು ಭ್ರಮೆಯ
ರಾಜನಾಗಿ ಮೆರೆದೆಯ
ರಾಜ್ಯವಾಳದೆ ಸರಿದೆಯ
ವ್ಯಾಜ್ಯವಿಲ್ಲದೆ ಮಮತೆಯ
ಮರಳಿ ಬಾರದೆ ತೊರೆದೆಯ
ವಿಧಿಯ ಆಟವ ಶಪಿಸುವೆ
ವಧಿಸಿ ಕರೆದೆಯ ಜವವೆ
ರಾಜಕುಮಾರನು ಪುನೀತ
ನೀವು ಇಲ್ಲದೆ ನಾವ್ ಅನಾಥ
ಮರುಳಿ ಹುಟ್ಟಿ ಬಾರಯ್ಯ
ನಿನ್ನ ದಾರಿಗೆ ನಾವಯ್ಯ
ಕರುಣಿ ತೋರ ಯಮರಾಯ
ಕಳಿಸಿ ಕೊಡೊ ನಿನ್ನ ದಮ್ಮಯ್ಯ.
– ಚನ್ನಕೇಶವ ಜಿ. ಲಾಳನಕಟ್ಟೆ
ಬೆಂಗಳೂರಿಗೆ ಆಗಮಿಸಿದ ಪುನೀತ್ ಪುತ್ರಿ ಧೃತಿ: ನೋವಿನ ಭಾರ ಹೊತ್ತುಕಂಡೇ ಹೆಜ್ಜೆ ಹಾಕಿದ ಮಗಳು…
ಸಾವಿಗೂ ಮುನ್ನಾ ಪುನೀತ್ ಕರೆ ಮಾಡಿದ್ದು ಯಾರಿಗೆ? ಅದೆಲ್ಲವೂ ಕೊನೆಯಾಗಿಯೇ ಉಳಿಯಿತಲ್ಲ…