ಬೆಂಗಳೂರು: ಶಾಸಕ ಪ್ರಿಯಾಂಕ್ ಖರ್ಗೆ ಅವರ ಪತ್ನಿಯ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳರಿಬ್ಬರು ಸೇರಿ ಒಟ್ಟು ಐವರು ಸದಾಶಿವನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮೋಹಿನ್ ತಾಜ್(27), ಶೇಕ್ ಇಲಿಯಾಸ್(28), ಜಬೀ(28), ಅಸ್ಲಾಂ(24) ಮತ್ತು ಶಾಹಿದ್(26) ಬಂಧಿತರು. ಫೆ.6ರ ಬೆಳಗ್ಗೆ 6.45ರಲ್ಲಿ ಮನೆ ಸಮೀಪದಲ್ಲಿರುವ ಸದಾಶಿವನಗರದ ಅಫಿನಿಟಿ ಜಿಮ್ ಬಳಿ ಪ್ರಿಯಾಂಕ್ ಖರ್ಗೆ ಅವರ ಪತ್ನಿ ಶ್ರುತಿ ಮೊಬೈಲ್ನಲ್ಲಿ ಮಾತನಾಡಿಕೊಂಡು ವಾಯುವಿಹಾರ ಮಾಡುತ್ತಿದ್ದರು. ದ್ವಿಚಕ್ರವಾಹನದಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದ ಮೋಹಿನ್ ಹಾಗೂ ಶೇಖ್ ಇಲಿಯಾಸ್, ಏಕಾಏಕಿ ಐಫೋನ್-11 ಮೊಬೈಲ್ ಕಸಿದುಕೊಂಡು ಸ್ಯಾಂಕಿ ಕರೆ ಕಡೆ ಪರಾರಿಯಾಗಿದ್ದರು. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಕೃತ್ಯ ನಡೆದ ಸ್ಥಳದ ಸಮೀಪದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಆರೋಪಿಗಳು ಬೈಕ್ನಲ್ಲಿ ಓಡಾಡುತ್ತಿರುವುದು ಸೆರೆಯಾಗಿತ್ತು.
ಈ ಆಧಾರದ ಮೇಲೆ ಮೋಹಿನ್ ಹಾಗೂ ಇಲಿಯಾಸ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇವರು ಕೊಟ್ಟ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಹಿನ್ ಖಾನ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಸುಲಿಗೆ, ಮೊಬೈಲ್ ಕಳ್ಳತನ ಸೇರಿ 30ಕ್ಕೂ ಅಧಿಕ ಪ್ರಕರಣಗಳಿವೆ. ಮೋಹಿನ್ ಖಾನ್ ಸೂಚನೆ ಮೇರೆಗೆ ಇತರ ಆರೋಪಿಗಳು ಅಪರಾಧ ಕೃತ್ಯ ಎಸಗುತ್ತಿದ್ದರು. ಆರೋಪಿಗಳು ನಗರದ ವಿವಿಧಡೆ ಬೈಕ್ಗಳನ್ನು ಕದಿಯುತ್ತಿದ್ದರು. ಕದ್ದ ಬೈಕ್ನಲ್ಲಿ ನಗರದೆಲ್ಲೆಡೆ ಸುತ್ತಾಡಿ ಒಂಟಿಯಾಗಿ ಮೊಬೈಲ್ನಲ್ಲಿ ಮಾತನಾಡುವವರನ್ನು ಟಾರ್ಗೆಟ್ ಮಾಡಿ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಕದ್ದ ಮೊಬೈಲ್ನ್ನು 3ರಿಂದ 5 ಸಾವಿರ ರೂ.ಗೆ ಆರೋಪಿ ಅಸ್ಲಾಂಗೆ ಮಾರಾಟ ಮಾಡುತ್ತಿದ್ದರು. ಬಂಧಿತರ ವಿಚಾರಣೆ ವೇಳೆ ಎಚ್ಎಸ್ಆರ್ ಲೇಔಟ್ನಲ್ಲಿ ದರೋಡೆ ನಡೆಸಿರುವ ಸಂಗತಿ ಬಾಯ್ಬಿಟ್ಟಿದ್ದಾರೆ.
ಲೋಕ ರಕ್ಷಿಸುವ ಮಾಯೆ ನಾನು, ನಿಮ್ಮನ್ನು ಕಾಪಾಡುವೆ… ಪ್ರಧಾನಿ ಮೋದಿಗೆ ಶಿಬರೂರು ಕೊಡಮಣಿತ್ತಾಯ ದೈವ ಅಭಯ