ಮದ್ದೂರು: ಶ್ರೇಷ್ಠ ವಚನಕಾರ, ಕನ್ನಡದ ತ್ರಿಪದಿ ಚಕ್ರವರ್ತಿ, ಜನರ ನಡುವೆ ಬದುಕಿದ ಜನಪರ ಕವಿ ಸರ್ವಜ್ಞ ಎಂದು ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತಿ, ಧರ್ಮ ಸಂಘರ್ಷದ ವಿರುದ್ಧ ಕಟುವಾಗಿ ಟೀಕಿಸಿ, ವಿಶ್ವ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದ ಸರ್ವಜ್ಞನ ವಚನಗಳು ಇಂದಿನ ಸಮಾಜಕ್ಕೆ ದಿವ್ಯೌಷಧ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಿಡಿಒ ಪ್ರಭಾಕರ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೋರಾಪುರದ ಶಿವಲಿಂಗಯ್ಯ, ಎಚ್.ಹೊಸಹಳ್ಳಿ ಎಂ.ಗೀತಾ ಮರಿಸಿದ್ದಗುಂಡಣ್ಣ, ಮೆಣಸಗೆರೆ ಪುಷ್ಪಾಲತಾ ಗಿರೀಶ್, ಭುಜವಳ್ಳಿ ಮಂಜುಳಾ ಕಾಳಶೆಟ್ಟಿ, ಹೂತಗೆರೆ ಕಮಲಮ್ಮ ರಾಮಣ್ಣ, ಕೆ.ಬೆಳ್ಳೂರು ಲಕ್ಷ್ಮಮ್ಮ ಅವರನ್ನು ಅಭಿನಂದಿಸಲಾಯಿತು. ಸರ್ವಜ್ಞ ಕುಂಬಾರ ಸಂಘದ ಅಧ್ಯಕ್ಷ ಶಿವಣ್ಣ, ಗೌರವ ಅಧ್ಯಕ್ಷ ನಾರಾಯಣಶೆಟ್ಟಿ, ಮುಖಂಡರಾದ ಗೋವಿಂದಯ್ಯ ಇತರರು ಇದ್ದರು.