More

    ಬೆಂಗಳೂರಲ್ಲಿ 10 ಲಕ್ಷ ರೂ. ಕದ್ದಿದ್ದ ಪೊಲೀಸ್​ ಮುಖ್ಯಪೇದೆ ಬಂಧನ!

    ಬೆಂಗಳೂರು: ಆರೋಪಿಗಳಿಂದ ಜಪ್ತಿ ಮಾಡಿದ್ದ 50 ಲಕ್ಷ ರೂ. ಪೈಕಿ 10 ಲಕ್ಷ ರೂ. ಎಗರಸಿದ್ದ ಪೊಲೀಸ್​ ಮುಖ್ಯಪೇದೆಯೊಬ್ಬರನ್ನು ಚಂದ್ರಾಲೇಔಟ್​ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಮಹೇಂದ್ರಗೌಡ (45) ಬಂಧಿತ. ರಾಮನಗರ ಜಿಲ್ಲೆ ರಾಮಾಪುರ ಗ್ರಾಮದ ಲಿಂಗೇಶ್​ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಹೇಂದ್ರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕಮಿಷನ್​ ಆಸೆಗೆ ನೋಟು ಬದಲಾವಣೆಗೆ ಬಂದಿದ್ದವರ ಬಳಿ ಜಪ್ತಿ ಮಾಡಿದ 50 ಲಕ್ಷ ರೂ. ಪೈಕಿ 10 ಲಕ್ಷ ರೂ. ಎತ್ತಿಕೊಂಡಿರುವುದು ತನಿಖೆಯಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್​ ನಿಂಬರಗಿ ಅವರು ಮಹೇಂದ್ರರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

    50 ಲಕ್ಷ ರೂ. ನೋಟು ಬದಲಾವಣೆ: ರಾಮನಗರದ ಲಿಂಗೇಶ್​ ಎಂಬುವರು ವ್ಯವಸಾಯದ ಜತೆಗೆ ರಿಯಲ್​ ಎಸ್ಟೇಟ್​ ವ್ಯವಹಾರ ಮಾಡಿಕೊಂಡಿದ್ದಾರೆ. ಇವರ ಸ್ನೇಹಿತ ಪ್ರದೀಪ್​ ಇತ್ತೀಚೆಗೆ ಕರೆ ಮಾಡಿ, “ನನ್ನ ಸೇಹಿತರೊಬ್ಬರ ಬಳಿ 2 ಸಾವಿರ ರೂ. ಮುಖಬೆಲೆಯ ಕೋಟ್ಯಂತರ ರೂಪಾಯಿ ಇದೆ. ಮುಂದಿನ ದಿನಗಳಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಸಾಧ್ಯತೆ ಇರುವುದರಿಂದ 500 ರೂ. ಮುಖಬೆಲೆಯ ನೋಟುಗಳಿಗೆ ಬದಲಾಯಿಸಲು ತೀರ್ಮಾನಿಸಿದ್ದಾರೆ. 500 ರೂ. ಮುಖ ಬೆಲೆಯ ನೋಟು ನೀಡಿದರೆ, ಶೇ.10 ಕಮಿಷನ್​ ನೀಡಲಿದ್ದಾರೆ” ಎಂದು ಹೇಳಿದ್ದರು. ಇದಕ್ಕೆ ಒಪ್ಪಿದ ಲಿಂಗೇಶ್​, 500 ಮುಖಬೆಲೆಯ 50 ಲಕ್ಷ ರೂ. ಹೊಂದಿಸಿದ್ದರು. ಅ.2ರಂದು ಲಿಂಗೇಶ್​ ಮತ್ತು ಪ್ರದೀಪ್​ ಕಾರಿನಲ್ಲಿ ಎಲೆಕ್ಟ್ರಾನಿಕ್ಸ್​ ಸಿಟಿ ಸಮೀಪದ ಸಿಂಗಸಂದ್ರಕ್ಕೆ ಹೋಗಿದ್ದರು. ಅಲ್ಲಿ ವೆಟ್ರಿವೇಲು ಎಂಬಾತನನ್ನು ಭೇಟಿಯಾಗಿದ್ದರು. ಬಳಿಕ ಮೂವರು ಚಂದ್ರಾ ಲೇಔಟ್​ಗೆ ಬಂದಿದ್ದರು. ಈ ವೇಳೆ ವೆಟ್ರಿವೇಲು ಸ್ನೇಹಿತ ಶ್ಯಾಮ್​ ಸಂತೋಷ್​ ಎಂಬುವರು ಅಲ್ಲಿಗೆ ಬಂದಿದ್ದು, ನಾಲ್ವರು ಮಾತನಾಡುತ್ತಾ ನಿಂತಿದ್ದರು.

    ಠಾಣೆ ಹೋಗುವ ಮಾರ್ಗಮಧ್ಯೆ ಕರಾಮತ್ತು: ಪೊಲೀಸ್​ ಮುಖ್ಯಪೇದೆ ಮಹೇಂದ್ರಗೌಡ ಈ ವೇಳೆ ಹೊಯ್ಸಳ ವಾಹನದಲ್ಲಿ ಆ ಕಡೆಗೆ ಗಸ್ತು ಬಂದಿದ್ದು, ನಾಲ್ವರನ್ನು ಗಮನಿಸಿದ್ದರು. ಪೊಲೀಸ್​ ವಾಹನ ನೋಡಿದ ಈ ನಾಲ್ವರು ಭಯಗೊಂಡು ಕಾರಿನಲ್ಲಿ ಮುಂದೆ ಹೋಗಲು ಪ್ರಯತ್ನಿಸಿದ್ದರು. ಅಷ್ಟರಲ್ಲಿ ಮಹೇಂದ್ರಗೌಡ ಮತ್ತೊಂದು ಹೊಯ್ಸಳ ವಾಹನ ಕರೆಸಿಕೊಂಡು ನಾಲ್ವರನ್ನು ಆ ವಾಹನದಲ್ಲಿ ಪೊಲೀಸ್​ ಠಾಣೆಗೆ ಕಳುಹಿಸಿದ್ದರು. ಈ ವೇಳೆ ಲಿಂಗೇಶ್​ ಅವರು ಬಂದಿದ್ದ ಕಾರನ್ನು ಮಹೇಂದ್ರಗೌಡನೇ ಚಲಾಯಿಸಿಕೊಂಡು ಪೊಲೀಸ್​ ಠಾಣೆಗೆ ತಂದಿದ್ದ. ಈ ವೇಳೆ ಕಾರಿನಲ್ಲಿ ಪತ್ತೆಯಾದ ಬ್ಯಾಗ್​ ಅನ್ನು ಪೊಲೀಸರು ಪರಿಶೀಲಿಸಿದಾಗ 40 ಲಕ್ಷ ರೂ. ಪತ್ತೆಯಾಗಿತ್ತು. ಲಿಂಗೇಶ್​, “ನಾನು ಮನೆಯಿಂದ 50 ಲಕ್ಷ ರೂ. ಬ್ಯಾಗ್​ನಲ್ಲಿ ಹಾಕಿಕೊಂಡು ಬಂದಿದ್ದೆ. ಇದೀಗ 40 ಲಕ್ಷ ರೂ. ಎನ್ನಲಾಗುತ್ತಿದೆ. ನಮ್ಮ ಕಾರನ್ನು ಠಾಣೆಗೆ ತಂದ ಮುಖ್ಯಪೇದೆ​ ಮಹೇಂದ್ರಗೌಡನ ಮೇಲೆ ಅನುಮಾವಿದೆ’ ಎಂದು ಚಂದ್ರಾಲೇಔಟ್​ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದಾಗ, ಮಹೇಂದ್ರಗೌಡ ದಾರಿ ಮಧ್ಯೆ 10 ಲಕ್ಷ ರೂ. ಎಗರಿಸಿರುವುದು ಸಾಬೀತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕುಂಬಳೆ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ‘ದೇವರ ಮೊಸಳೆ’ ಬಬಿಯಾ ಇನ್ನಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts