ಬೆಂಗಳೂರು: ಮೂರನೇ ದಿನದ(ಮಂಗಳವಾರ) ಮೇಕೆದಾಟು ಪಾದಯಾತ್ರೆಯಲ್ಲಿ ನಾಯಕರ ದಾರಿ ಸುಗಮ ಮಾಡಿಕೊಡುವ ಭರದಲ್ಲಿ ಸಂಸದ ಡಿ.ಕೆ.ಸುರೇಶ್ ಅವರು ರಾಜ್ಯ ಯುವ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷ ನಲಪಾಡ್ ಹ್ಯಾರಿಸ್ ಅವರ ಕೊರಳ ಪಟ್ಟಿ ಹಿಡಿದು ಬೈಯುತ್ತಲೇ ದೂರ ತಳ್ಳಿದ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದೃಶ್ಯಮಾಧ್ಯಮಗಳಲ್ಲಿ ಇದನ್ನು ನೋಡಿದ ನಲಪಾಡ್ ಸ್ನೇಹಿತರು ಅವರಿಗೆ ಒಂದೇ ಸಮನೆ ಫೋನ್ ಮಾಡಿ ಹೀಗೇಕಾಯಿತು ಅಂತ ವಿಚಾರಿಸತೊಡಗಿದ್ದಾರೆ. ಇದೀಗ ಈ ಘಟನೆ ಕುರಿತು ನಲಪಾಡ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಫೇಸ್ಬುಕ್ ಲೈವ್ನಲ್ಲಿ ಮಾತನಾಡಿರುವ ನಲಪಾಡ್, ‘ಇದು ನೀರಿಗಾಗಿ ನಡೆಯುತ್ತಿರುವ ಹೋರಾಟ. ಸಾವಿರಾರು ಜನ ಪಾದಯಾತ್ರೆಗೆ ಬರ್ತಿದ್ದಾರೆ. ಎಲ್ಲರೂ ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಬಳಿ ನಿಂತು ಫೋಟೋ ತೆಗೆಸಿಕೊಳ್ಳೋಕೆ ಮುಗಿಬೀಳ್ತಿದ್ದಾರೆ. ಈ ವೇಳೆ ನಾಯಕರ ಮೈಮೇಲೆ ಕಾರ್ಯಕರ್ತರು ಬೀಳುವುದನ್ನು ತಡೆಯೋದು ನಮ್ಮ ಕರ್ತವ್ಯ. ನಿನ್ನೆಯೂ ಕೂಡ ಹಾಗೆ ಆಯ್ತು. ಡಿಕೆ ಸುರೇಶ್ ಅವರು ನಾಯಕರ ಮೇಲೆ ಕಾರ್ಯಕರ್ತರು ಮುಗಿಬೀಳೋದನ್ನು ತಡೆಯುತ್ತಿದ್ದರು, ನಾನು ಅಲ್ಲೇ ಇದ್ದೆ. ಆ ವೇಳೆ ಸುರೇಶ್ ಅವರು ನನ್ನನ್ನು ನೋಡದೇ ತಳ್ಳಿದರು. ಇದು ಆಕಸ್ಮಿಕ ಘಟನೆ ಅಷ್ಟೆ. ಸುರೇಶ್ ಅವರು ನನ್ನ ಅಣ್ಣ. ನಾವು ಒಂದೇ ಕುಟುಂಬದಂತೆ ಇದ್ದೀವಿ. ಇದೆಲ್ಲವನ್ನೂ ದೊಡ್ಡದ್ದು ಮಾಡಬೇಡಿ. ಸುರೇಶ್ ಅವರು ನನ್ನನ್ನು ತಳ್ಳಿದ್ದು ಒಂಚೂರು ನನಗೆ ಬೇಸರ ಆಗಿಲ್ಲ. ದಯವಿಟ್ಟು ಬೇಡದ ವಿಷಯವನ್ನ ದೊಡ್ಡದು ಮಾಡಬೇಡಿ. ಬೆಂಗಳೂರಿಗೆ ಕುಡಿವ ನೀರಿನ ಸಮಸ್ಯೆ ಉಂಟಾಗಬಾರದು. ಎಲ್ಲರೂ ಈ ಐತಿಹಾಸಿಕ ಹೋರಾಟದಲ್ಲಿ ಪಾಲ್ಗೊಳ್ಳಿ’ ಎಂದು ಮನವಿ ಮಾಡಿದ್ದಾರೆ.
ಮಂಗಳವಾರದ ಪಾದಯಾತ್ರೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು. ಇದೇ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದ ಕಾರಣದಿಂದಾಗಿ ಜನಜಂಗುಳಿ ಮೀರಿತ್ತು. ಈ ಹಿನ್ನೆಲೆಯಲ್ಲಿ ನಾಯಕರ ಪಾದಯಾತ್ರೆ ದಾರಿಯನ್ನು ಸುಗಮ ಮಾಡಿಕೊಡಲು ಸ್ವತಃ ಡಿ.ಕೆ. ಸುರೇಶ್ ಮುಂದೆ ನಿಂತಿದ್ದರು. ಈ ವೇಳೆ ನಲಪಾಡ್ ಹ್ಯಾರಿಸ್ ಅವರ ಕೊರಳ ಪಟ್ಟಿಯನ್ನು ಹಿಡಿದು ಸುರೇಶ್ ದೂರ ತಳ್ಳಿದ್ದರು. ಮತ್ತೊಬ್ಬ ಕಾರ್ಯಕರ್ತನೊಬ್ಬ ಫೋಟೋ ತೆಗೆಯಲು ಮುಂದಾದಾಗ ಅವರನ್ನೂ ಸಹ ಇದೇ ರೀತಿ ಸುರೇಶ್ ನೂಕಿದ್ದರು.
ಕರುಳ ಕುಡಿಯನ್ನೇ ಕೊಚ್ಚಿ ಕೊಂದ ತಾಯಿ! ಆಕೆ ಮೈಮೇಲೆ ದೇವರು ಬರುತ್ತಿತ್ತಂತೆ… ಮೈಸೂರು ಜಿಲ್ಲೇಲಿ ಅಮಾನವೀಯ ಘಟನೆ
ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…