ಶಿವಮೊಗ್ಗ: ಮಗು ಹುಟ್ಟಿದ ಖುಷಿಗೆ ಏನೂ ಇಲ್ವಾ? ಖುಷಿಗೆ ಕೊಡಿ… ಎನ್ನುತ್ತಾ ಬಾಣಂತಿಯರ ಸಂಬಂಧಿಕರ ಬಳಿ ಕೈ ಚಾಚಿದ ತಪ್ಪಿಗೆ ಆಸ್ಪತ್ರೆ ಸಿಬ್ಬಂದಿಗಳಿಬ್ಬರು ಕೆಲಸವನ್ನೇ ಕಳೆದುಕೊಂಡಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್ನ ಶರಾವತಿ ವಿಭಾಗದಲ್ಲಿ ಗಂಡು ಮಗು ಜನಿಸಿದರೆ 2 ಸಾವಿರ ರೂ. ಮತ್ತು ಹೆಣ್ಣು ಮಗು ಜನಿಸಿದರೆ 1,500 ರೂಪಾಯಿಯನ್ನು ಮಗುವಿನ ಕುಟುಂಬಸ್ಥರು ಅಥವಾ ಸಂಬಂಧಿಕರ ಬಳಿ ‘ಮಗು ಜನಿಸಿದ ಖುಷಿಗೆ’ ಎಂದು ಹಣ ಪಡೆಯುತ್ತಿದ್ದ ಇಬ್ಬರು ನರ್ಸ್ಗಳು ಕೆಲಸ ಕಳೆದುಕೊಂಡಿದ್ದಾರೆ.
ಹೊರಗುತ್ತಿಗೆ ನರ್ಸ್ಗಳಾದ ಚಂದ್ರಮ್ಮ ಮತ್ತು ಇಂದ್ರಮ್ಮ ಎಂಬುವರು ಹೆರಿಗೆ ಬಳಿಕ ಬಾಣಂತಿಯರ ಸಂಬಂಧಿಕರಿಂದ ಹಣ ಸುಲಿಗೆ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಭದ್ರಾವತಿ ತಾಲೂಕಿನ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸಂಬಂಧಿಕರಿಂದ 1,500 ರೂ. ಕೇಳಿದ್ದರು. ಬಡವರೆಂದು ಹೇಳಿಕೊಂಡ ಬಾಣಂತಿ ಸಂಬಂಧಿಕರು, 600 ರೂ. ಕೊಡಲು ಹೋದರೂ ಮುಟ್ಟದೆ 1,500 ರೂ.ಗೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಬಾಣಂತಿ ಸಂಬಂಧಿಕರು ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕಕ್ಷ ಡಾ. ಎಸ್.ಶ್ರೀಧರ್ ಅವರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಾ. ಶ್ರೀಧರ್, ಹಣಕ್ಕೆ ಬೇಡಿಕೆ ಇಟ್ಟಿರುವುದನ್ನು ದೃಢಪಡಿಸಿಕೊಂಡು ಇಬ್ಬರನ್ನೂ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಶಿವಮೊಗ್ಗ ಮೆಗ್ಗಾನ್ ಹೆರಿಗೆ ವಾರ್ಡ್ನಲ್ಲಿ ಹೆರಿಗೆಯಾಗುತ್ತಿದ್ದಂತೆ ಖುಷಿಗೆ ಕೊಡಿ ಎನ್ನುತ್ತಾ (ಒತ್ತಾಯ ಮಾಡಿ) ಮಗವಿನ ಸಂಬಂಧಿಕರಿಂದ ಹಣ ಪಡೆಯುತ್ತಿದ್ದ ಇಬ್ಬರು ನರ್ಸ್ಗಳೀಗ ಕೆಲಸದಿಂದ ಅಮಾನತು ಆಗಿದ್ದಾರೆ.